ಚಂದನವನದಲ್ಲಿ ವಿಭಿನ್ನ ಬಗೆಯ ನಮ್ಮ ನೆಲದ ಸೊಗಡು , ಭಾಷೆ ಕುರಿತಾದಂತ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ ಬರುತ್ತಿರುತ್ತವೆ. ಆ ನಿಟ್ಟಿನಲ್ಲಿ ಈ ಬಾರಿ ಕೋಲಾರ ಮಣ್ಣಿನ ಸೊಗಡಿನ ಜೊತೆಗೆ ಸಿನಿಮಾ ರಂಗದಲ್ಲಿ ಹೊಸ ವ್ಯಾಖ್ಯಾನ ಬರೆಯಲು ಮುಂದಾಗಿದೆ "ದಿ ಕಲರ್ ಆಫ್ ಟೊಮೆಟೊ" ಚಿತ್ರ ತಂಡ.
ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ಮಾಗಡಿ ರಸ್ತೆಯಲ್ಲಿರುವ ಜಿ.ಟಿ. ಮಾಲ್ ನ ಸಿನಿಮಾ ಥಿಯೇಟರ್ ನಲ್ಲಿ ಪತ್ರಿಕಾಗೋಷ್ಟಿಯನ್ನು ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಚಿತ್ರದ ಟೈಟಲ್ ಪೋಸ್ಟರ್ ಅನ್ನು ನಟ ಧ್ರುವ ಸರ್ಜಾ ಅಧಿಕೃತವಾಗಿ ಲಾಂಚ್ ಮಾಡಿದನ್ನು ಬೆಳ್ಳಿ ಪರದೆ ಮೇಲೆ ತೋರಿಸಲಾಯಿತು.
ಹಾಗೆಯೇ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ನೋಡಿದ ಧ್ರುವ ಸರ್ಜಾ ಚಿತ್ರದ ಟೀಸರ್ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕುವಂತಿದೆ. ಪೋಸ್ಟರ್ ಕೂಡ ವಿಭಿನ್ನವಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.
ಈ ಚಿತ್ರವನ್ನ 1to100 ಡ್ರೀಮ್ಸ್ ಮೂವೀಸ್ ಬ್ಯಾನರ್ ನಡಿಯಲ್ಲಿ ಸ್ವಾತಿ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇದು ಇವರ ಎರಡನೇ ಚಿತ್ರವಾಗಿದೆ. ಈಗಾಗಲೇ ಎಸ್. ನಾರಾಯಣ್ ಸಾರಥ್ಯದ 5ಡಿ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ.
ಸದಭಿರುಚಿಯ ಚಿತ್ರವನ್ನು ನೀಡುವ ಉದ್ದೇಶದಿಂದ ಉದ್ಯಮಕ್ಕೆ ಬಂದಿದೇನೆ. ಸಾಲು ಸಾಲಾಗಿ ಉತ್ತಮ ಚಿತ್ರವನ್ನು ನೀಡುತ್ತೇನೆ. ಈ ಚಿತ್ರದ ಶೀರ್ಷಿಕೆ ಕೇಳಿ ನಾನು ಸಿನಿಮಾ ನಿರ್ಮಿಸಲು ಮುಂದಾದೆ. ಒಳ್ಳೆಯ ತಂಡ ಸಿಕ್ಕಿದೆ. ಮಾಧ್ಯಮದವರ ಪ್ರೀತಿ ಸಹಕಾರ ನಮ್ಮ ಮೇಲೆ ಇರಲಿ ಎಂದು ಕೇಳಿಕೊಂಡರು.
ಇನ್ನು ಚಿತ್ರಕ್ಕೆ ಕಥೆಯನ್ನು ಒದಗಿಸಿರುವಂತಹ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡುತ್ತಾ ಸುಮಾರು ಒಂದು ವರ್ಷದ ಹಿಂದೆ ನನ್ನ ಒಡನಾಡಿ ರಾಮಕೃಷ್ಣ ಬೆಳ್ತೂರು ಹಾಗೂ ನಿರ್ದೇಶಕ ತಾಯಿ ಲೋಕೇಶ್ ನನ್ನ ಬಳಿ ಬಂದಿದ್ದರು , ಆಗ ನಾನು ಈ ಚಿತ್ರದ ಕಥೆ ಹಾಗೂ ಶೀರ್ಷಿಕೆನ ಹೇಳಿದ್ದೆ.
ಇದು ಈ ನೆಲದ ಸೊಗಡಿನ ಕಥೆಯಾಗಿದೆ ಎಂದೆ ಹಾಗೇ ಶೀರ್ಷಿಕೆ ಕೂಡ ಇಷ್ಟಪಟ್ಟು "ದಿ ಕಲರ್ ಆಫ್ ಟೊಮೆಟೊ" ನಮ್ಮ ಚಿತ್ರಕ್ಕೆ ಸೂಕ್ತ ಶೀರ್ಷಿಕೆ ಎಂದು ಹೇಳಿ ಈಗ ಚಿತ್ರವನ್ನ ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ಹಿಂಸೆಯ ಹೊಸ ವ್ಯಾಖ್ಯಾನವನ್ನೇ ಸೃಷ್ಟಿಸಲಿದೆ. ನಾನು ಬರೆದ ಹಲವು ಕಥೆಗಳು ಹೊಸ ನಿರ್ದೇಶಕರಿಗೆ ಅನುಕೂಲ ಮಾಡಿಕೊಟ್ಟಿದೆ. ಅವರೊಟ್ಟಿಗೆ ಕೆಲಸ ಮಾಡುವ ಖುಷಿಯೇ ನನಗೆ ತೃಪ್ತಿ ತಂದಿದೆ. ಈ ತಂಡವು ಅಷ್ಟೆ ಪೂರ್ವತಯಾರಿಯೊಂದಿಗೆ ಮುಂದೆ ಬಂದಿದ್ದು, ಇದು ಬೇರೆಯದೇ ಚಿತ್ರವಾಗಿ ಎಲ್ಲರ ಗಮನವನ್ನು ಸೆಳೆದಿದೆ ಎಂಬ ಭರವಸೆಯನ್ನು ನೀಡಿದರು.
ಇನ್ನು ಈ ಚಿತ್ರದ ಯುವ ನಿರ್ದೇಶಕ ತಾಯಿ ಲೋಕೇಶ್ ಮಾತನಾಡುತ್ತಾ ಈ ಸಿನಿಮಾ ಕಥೆಯನ್ನ ಕೋಟಿಗಾನಹಳ್ಳಿ ರಾಮಯ್ಯನವರು ನೀಡಿದರು. ಇದು ಬೇರೆ ತರಹ ಸಿನಿಮಾ ಆಗಿ ಹೊರಬರಲಿದೆ.
ನಾವು ಪರಭಾಷಾ ಚಿತ್ರಗಳ ಸೊಗಡಿನ ಕಥೆಯನ್ನ ಕೇಳಿ ಈ ರೀತಿಯ ಚಿತ್ರ ನಾವು ಮಾಡಬೇಕು ಎಂಬ ಹಂಬಲ ನಮಗಿರುತ್ತದೆ. ಆದರೆ ಅದಕ್ಕೆ ಪೂರಕವಾಗಿರುವ ತಂಡ ಬೇಕಿತ್ತು. ಈಗ ಅಂತ ತಂಡ ಸಿಕ್ಕಿದೆ. ನಮ್ಮ ಸೊಗಡಿನ ಕಥೆಯಲ್ಲಿ ಬರೀ ವೈಲೆನ್ಸ್ ಅಲ್ಲದೆ ಪ್ರೀತಿ , ಸ್ನೇಹ ಸೇರಿದಂತೆ ಹಲವಾರು ಅಂಶಗಳು ಒಳಗೊಂಡಿದ್ದು , ಕೋಲಾರದಲ್ಲಿ ಬಹುತೇಕ ಚಿತ್ರೀಕರಣ ಚಿತ್ರೀಕರಣವಾಗಲಿದೆ.
ಕೋಲಾರದಲ್ಲಿ ಬೆಳೆಯುವ ಟೊಮೆಟೊ ವಿಶ್ವದ ನಾನಾ ಭಾಗಕ್ಕೆ ಸಾಗಾಟವಾಗುತ್ತದೆ. ಇದು ಮಾದರಿ ಸ್ಥಳವೂ ಹೌದು , ಇಲ್ಲಿನ ಸೊಗಡಿನ ಕಥೆಯ ಜೊತೆಗೆ 7ಊರುಗಳ ಸುತ್ತ ಇರುವ ಸಂಸ್ಕೃತಿ ಬದುಕನ್ನು ಬಿಂಬಿಸುವ ಜೊತೆಗೆ ಮನರಂಜನಾ ಅಂಶವನ್ನು ಪ್ರೇಕ್ಷಕರ ಮುಂದೆ ತೆರೆದಿಡುವಂತ ಚಿತ್ರ ಇದಾಗಲಿದೆ.
ಈ ಚಿತ್ರದಲ್ಲಿ 3ಕಥೆಗಳು ಸಮನಾಗಿ ಸಾಗುತ್ತದೆ ಎಲ್ಲವೂ ಒಂದಕ್ಕೆ ಒಂದು ಬೆಸೆದುಕೊಂಡಂತೆ ಇರುತ್ತದೆ. ಒಂದರಲ್ಲಿ ಪ್ರತಾಪ್ ನಾರಾಯಣ್ , ಮತ್ತೊಂದು ಬಿ. ಸುರೇಶ್ ಹಾಗೂ ಇನ್ನೊಂದು ಬೇರೆ ಟ್ರ್ಯಾಕ್ ಸಾಗಲಿದೆ. ಇದು ನನ್ನ ಮೊದಲ ಸಿನಿಮಾ.
ನಿರ್ಮಾಪಕರು ನನಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭಿಸಲಿದೇವೆ ಹಂತ ಹಂತವಾಗಿ ಎಲ್ಲಾ ವಿಚಾರವನ್ನು ನೀಡುತ್ತೇನೆ ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರ ಇರಲಿ ಎಂದು ಮನವಿ ಮಾಡಿದರು.
ಈ ಚಿತ್ರದ ನಾಯಕನಾಗಿ ಪ್ರತಾಪ್ ನಾರಾಯಣ್ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಬೆಂಕಿ ಪಟ್ಟಣ ಚಿತ್ರದಲ್ಲಿ ಗಮನ ಸೆಳೆದ ಪ್ರತಾಪ್ 3ವರ್ಷದ ನಂತರ ಮತ್ತೆ ಕಾಣಿಸಿಕೊಳ್ಳುತ್ತಿದ್ದು , ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟು ಕೊಂಡಿದ್ದಾರೆ.
ಇದು ವೈಲೆನ್ಸ್ ಸಬ್ಜೆಕ್ಟ್ ಆಗಿದ್ದು , ಪ್ರೀತಿಯ ಎಳೆಯೂ ಈ ಚಿತ್ರದಲ್ಲಿ ಕಾಣಸಿಗಲಿದೆಯಂತೆ. ಸದ್ಯ ಚಿತ್ರದ ಟೀಸರ್ ನ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬಿಡುಗಡೆ ಮಾಡಿ ಶುಭಕೋರಿದ್ದಾರೆ. ತಂಡದೊಂದಿಗೆ ಒಳ್ಳೆ ಬಾಂಡಿಂಗ್ ಇದೆ. ಈ ಚಿತ್ರ ಬೇರೆ ಶೈಲಿಯಲ್ಲಿ ಹೊರಬರಲಿದೆ ಎಂದರು.
ಈ ಚಿತ್ರಕ್ಕೆ ಕೋಲಾರ ಗ್ರಾಮೀಣ ಪ್ರತಿಭೆಗಳು ಬಹುತೇಕರು ಅಭಿನಯಿಸಲಿದ್ದಾರೆ. ಈ ಕಾರ್ಯಕ್ರಮದ ಶುಭಾರಂಭದಲ್ಲಿ ಗಾಯನ ಮಾಡಿದ ಪ್ರತಿಭೆ ಉಮಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ರಾಮು ಸಂಗೀತ ವನ್ನು ನೀಡುತ್ತಿದ್ದು, ಈ ನೆಲದ ಸೊಗಡಿಗೆ ತಕ್ಕಂತೆ 6 ಹಾಡುಗಳು ಹೊರ ಬರಲಿದೆಯಂತೆ.
ಹಾಗೆಯೇ ಪ್ರಶಾಂತ್ ಸಾಗರ್ ಛಾಯಾಗ್ರಹಣವಿದೆ. ಇನ್ನು ಸಂಕಲನವನ್ನ ವಲ್ಲಿ ಕುಲ್ಯಸ್ ಮಾಡಲಿದ್ದು , ಮಂಜುನಾಥ್.ಕೆ ರವರ ಸಹನಿರ್ದೇಶನವಿದೆ. ಈಗಾಗಲೇ ಈ ಚಿತ್ರದ ಪೋಸ್ಟರ್ ಬಹಳಷ್ಟು ಗಮನ ಸೆಳೆದು ಸ್ಟೀಫನ್ ಈ ಕೆಲಸವನ್ನು ಮಾಡಿದ್ದಾರೆ.
ಇಡೀ ಚಿತ್ರದ ಪ್ರಚಾರ ಕಾರ್ಯವನ್ನು ಪಿ.ಆರ್. ಒ ಬಾಬುರವರು ನಿರ್ವಹಿಸಲಿದ್ದಾರೆ. ಒಟ್ಟಾರೆ "ದಿ ಕಲರ್ ಆಫ್ ಟೊಮೆಟೊ" ಸ್ಯಾಂಡಲ್ ವುಡ್ ನಲ್ಲಿ ಹೊಸ ವ್ಯಾಖ್ಯಾನ ಬರೆಯಲು ಮುಂದಾಗಿದ್ದು , ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಸಿಗಲಿದೆ.

