
ಮುಂಬೈ,ಅ.27-ಬಾಲಿವುಡ್ ನಟ ಶಾರೂಕ್ ಖಾನ್ ಅವರ ಪುತ್ರ ಆರ್ಯನ್ನನ್ನು ಬಂಧಿಸಿರುವ ಮಾದಕ ದ್ರವ್ಯ ನಿಯಂತ್ರಣ ದಳದ ಮೇಲೆ ದಾಳಿ ನಡೆಸುತ್ತಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಅವರ ಬಾಯಿಗೆ ಬೀಗ ಹಾಕುವಂತೆ ವ್ಯಕ್ತಿಯೊಬ್ಬರು ಬಾಂಬೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಮಾದಕ ದ್ರವ್ಯ ವ್ಯಸನಿಗಳ ಪುನರ್ವಸತಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೌಸರ್ ಆಲಿ ಎಂಬಾತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಡ್ರಗ್ ಸೇವನೆ ಮಾಡಿರುವವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕ್ಕೆ ಹೋರಾಟ ನಡೆಸುತ್ತಿರುವ ಎನ್ಸಿಬಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರೆ ಅದು ತನಿಖಾಧಿಕಾರಿಗಳ ಮಾನಸಿಕ ಸ್ಥೈರ್ಯ ಕುಸಿಯಲು ಕಾರಣವಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಮಲ್ಲಿಕ್ ಎನ್ಸಿಬಿ ವಿರುದ್ಧ ಯಾವುದೇ ಆರೋಪ ಮಾಡದಂತೆ ಸೂಚನೆ ನೀಡಬೇಕು ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.
ಎನ್ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ಅವರ ವಿರುದ್ಧ ಇತ್ತಿಚೆಗೆ ಮಲ್ಲಿಕ್ ಲಂಚ ಕೇಳಿದ ಆರೋಪ ಮಾಡಿರುವ ಬೆನ್ನಲ್ಲೆ ಆಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ತನಿಖಾ ಸಂಸ್ಥೆಗಳ ಮಾನಸಿಕ ಸ್ಥೈರ್ಯ ಕುಸಿಯುವಂತಹ ಕಾರ್ಯಗಳಿಗೆ ತಡೆ ಹಿಡಿಯುವಂತೆ ಮನವಿ ಮಾಡಿಕೊಂಡಿರುವುದು ವಿಶೇಷ.