ವಿದಿಶಾ, ಜು.17- ಬಾವಿಗೆ ಬಿದ್ದಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಮೂರು ಮಂದಿ ಮೃತಪಟ್ಟು, ಹಲವಾರು ಮಂದಿ ಬಾವಿಯೊಳಗೆ ಮಣ್ಣಿನಡಿ ಸಿಲುಕಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಜಿಲ್ಲಾ ಕೇಂದ್ರದಿಂದ 50 ಕಿಲೋ ಮೀಟರ್ ದೂರದಲ್ಲಿರುವ ಗಂಗಬಸೋಡಾದ ಲಾಲ್ ಪತ್ತರ್ ಗ್ರಾಮದಲ್ಲಿ ನಡೆದಿದೆ.
ಗುರುವಾರ ರಾತ್ರಿ ಬಾಲಕನೊಬ್ಬ ತೆರೆದ ಬಾವಿಗೆ ಬಿದ್ದಿದ್ದ, ಆತನನ್ನು ಮೇಲಕ್ಕೆ ಎತ್ತಲು ಹಲವಾರು ಮಂದಿ ಸೇರಿದ್ದರು. ಕೆಲವರು ಬಾವಿಯೊಳಗೆ ಇಳಿದಿದ್ದರು, ಇನ್ನೂ ಕೆಲವರು ಹಗ್ಗದ ಸಹಾಯದ ಮೂಲಕ ಬಾಲಕನನ್ನು ಮೇಲಕ್ಕೆ ಎಳೆದುಕೊಳ್ಳುವ ಪ್ರಯತ್ನದಲ್ಲಿದ್ದರು. ಸುಮಾರು 50 ಅಡಿ ಆಳದ ಬಾವಿಯಲ್ಲಿ 20 ಅಡಿಯಷ್ಟು ನೀರಿತ್ತು. ಬಾವಿದ ದಂಡೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.
ದಂಡೆಯ ಮೇಲಿದ್ದ ಜನ ಬಾವಿಯೊಳಗೆ ಬಿದ್ದಿದ್ದಾರೆ. ಮಣ್ಣಿನಡಿ ಸಿಲುಕದೆ ಇದ್ದ ಕೆಲವರು ಮೇಲಕ್ಕೆ ಹತ್ತಿ ಬಂದಿದ್ದಾರೆ.
ಇಂದು ಬೆಳಗ್ಗೆ ಇನ್ನೂ ಒಬ್ಬರ ಶವ ತೆಗೆಯಲಾಗಿದೆ. ಈವರೆಗೂ ಮೂವರು ಮೃತಪಟ್ಟಿರುವುದು ಖಚಿತವಾಗಿದ್ದು, ಉಳಿದವರನ್ನು ರಕ್ಷಣೆ ಮಾಡುವ ಕಾರ್ಯ ಭರದಿಂದ ಸಾಗಿದೆ. ರಾತ್ರಿಯೆ ಟ್ರಾಕ್ಟರ್ ಬಳಸಿ, ನಾಲ್ವರು ಪೊಲೀಸರು ಮತ್ತು ಸ್ಥಳೀಯರು ಬಾವಿಯೊಳಗಿದ್ದವರನ್ನು ಹೊರ ತೆಗೆಯುವ ಪ್ರಯತ್ನ ಮಾಡಿದ್ದರು.
ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮೃತ ಪಟ್ಟ ಕುಟುಂಬಗಳಿಗೆ ಐದು ¯ಕ್ಷ ರೂಪಾಯಿ ಪರಿಹಾರ, ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ನೆರವು ಘೋಷಿಸಿದ್ದಾರೆ. ಸ್ಥಳೀಯವಾಗಿ ನಡೆಯುತ್ತಿರುವ ರಕ್ಷಣಾ ಕಾರ್ಯಯನ್ನು ತಮ್ಮ ಕಚೇರಿಯಿಂದ ನೇರ ಉಸ್ತುವಾರಿ ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

