ಬೆಂಗಳೂರು,ಅ.27-ಬಟ್ಟೆ ವ್ಯಾಪಾರಿಯೊಬ್ಬ ತನ್ನ ಸ್ನೇಹಿತನನ್ನು ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ರಾತ್ರಿ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಿದ್ದಿಕ್(20) ಕೊಲೆಯಾದ ಯುವಕ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರ್ಬಾಜ್(20) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಿದ್ದಿಕ್ ಮತ್ತು ಅರ್ಬಾಜ್ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು , ಇವರಿಬ್ಬರು ಸ್ನೇಹಿತರಾಗಿದ್ದರು. ಡೇವಿಸ್ ರಸ್ತೆ ನಿವಾಸಿಯಾದ ಅರ್ಬಾಜ್ ಫುಟ್ಪಾತ್ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದನು. ರಾತ್ರಿ ಅರ್ಬಾಜ್ಗೆ ಫೋನ್ ಮಾಡಿ ನಿನ್ನ ಜೊತೆ ಮಾತನಾಡಬೇಕು ಬಾ ಎಂದು ಸಿದ್ದಿಕ್ ಕರೆಸಿಕೊಂಡಿದ್ದಾನೆ.
ರಾತ್ರಿ 11.30ರ ಸುಮಾರಿಗೆ ರಸಾದ್ ನಗರದ ರೋಲಿಂಗ್ ಮಿಲ್ ಬಳಿ ಅರ್ಬಾಜ್ ಬಂದಿ ದ್ದಾನೆ. ಆ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಆ ಸಂದರ್ಭದಲ್ಲಿ ಸಿದ್ದಿಕ್ ತನ್ನ ಬಳಿ ಇದ್ದ ಚಾಕುವಿನಿಂದ ಅರ್ಬಾಜ್ ಮೇಲೆ ಹಲ್ಲೆಗೆ ಯತ್ನಿಸಿದಾಗ ಅದೇ ಚಾಕು ಕಿತ್ತುಕೊಂಡು ಸಿದ್ದಿಕ್ಗೆ ಎದೆ, ಹೊಟ್ಟೆ ಇನ್ನಿತರ ಭಾಗಗಳಿಗೆ ಇರಿದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಅರ್ಬಾಜ್ ಕೆಳಗೆ ಬಿದ್ದ ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದನು.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಗೋವಿಂದಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆಗೆ ರವಾನಿಸಿ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಕೆಲವೇ ಗಂಟೆಗಳಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಸಿದ್ದಿಕ್ ಮತ್ತು ಅರ್ಬಾಜ್ ನಡುವೆ ಜಗಳ ಉಂಟಾಗಿತ್ತು. ಸ್ನೇಹಿತರು ಸೇರಿ ಇವರಿಬ್ಬರಿಗೆ ರಾಜಿ ಮಾಡಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

