ಬೆಂಗಳೂರು, ಸೆ.21- ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಲಾಪವನ್ನು ಮೂರೇ ದಿನಕ್ಕೆ ಮೊಟಕಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಈ ಮೊದಲು ತಿಂಗಳ ಅಂತ್ಯದವರೆಗೆ ಮಳೆಗಾಲದ ಅಧಿವೇಶನ ನಡೆಸಲು ಉದ್ದೇಶಿಸಲಾಗಿತ್ತು. ಅದರೆ ಜನ ಪ್ರತಿನಿಧಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೇವಲ ಮೂರನೇ ದಿನಕ್ಕೆ (ಬುಧವಾರ) ಕ್ಕೆ ಮುಕ್ತಾಯಗೊಳಿಸಲು ಸರ್ಕಾರ ಮುಂದಾಗಿದೆ.
ಭಾರೀ ವಿವಾದಕ್ಕೆ ಕಾರಣವಾಗಿರುವ ಭೂ- ಸುಧಾರಣಾ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಈ ಅಧಿವೇಶನದಲ್ಲಿ ಮಂಡಿಸದೇ, ಉಳಿದ ಮಸೂದೆಗಳನ್ನು ಮಂಡಿಸಿ ಉಭಯ ಸದನಗಳ ಒಪ್ಪಿಗೆ ಪಡೆಯಲಿದೆ. ಮೂರು ದಿನ ಕಲಾಪ ನಡೆಸುವ ಸರ್ಕಾರದ ತೀರ್ಮಾನಕ್ಕೆ ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಭೂ- ಸುಧಾರಣಾ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಈ ಅಧಿವೇಶನದಲ್ಲಿ ಮಂಡನೆ ಮಾಡದಿದ್ದರೆ ಮೂರು ದಿನ ಕಲಾಪ ನಡೆಸಲು ಒಪ್ಪಿಗೆ ಕೊಡುತ್ತೇವೆ. ಒಂದು ವೇಳೆ ಮೂರೇ ದಿನದಲ್ಲಿ ಎಲ್ಲಾ ಕಾಯ್ದೆಗಳನ್ನು ಮಂಡಿಸಲು ಸರ್ಕಾರ ಮುಂದಾದರೆ ಅದಕ್ಕೆ ಸಮ್ಮತಿ ನೀಡುವುದಿಲ್ಲ.
ಉಭಯ ಸದನಗಳಲ್ಲಿ ಚರ್ಚೆಯಾಗಿ ಬಹುಮತಕ್ಕೆ ಹಾಕಬೇಕು. ಚರ್ಚೆ ಇಲ್ಲದೆ ಒಪ್ಪಿಗೆ ನೀಡುವುದಿಲ್ಲ ಎಂಬುದು ಪ್ರತಿಪಕ್ಷಗಳ ಒತ್ತಾಯವಾಗಿದೆ. ಹಾಗೊಂದು ವೇಳೆ ನಿಗಧಿಯಾದ ಕಲಾಪ ಮೊಟಕುಗೊಳಿಸಬೇಕೆಂದರೆ ಕಡೇ ಪಕ್ಷ ಶನಿವಾರದವರೆಗೆ ಅಧಿವೇಶನ ನಡೆಸಲೇ ಬೇಕು. ಸರ್ಕಾರದ ಆತುರದ ತೀರ್ಮಾನಕ್ಕೆ ನಾವು ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ ತನ್ನ ತೀರ್ಮಾನ ಹೇಳಿದೆ.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಲಾಪವನ್ನು ಮೂರೇ ದಿನಕ್ಕೆ ಮೊಟಕುಗೊಳಿಸುವ ಸಂಬಂಧ ವಿಧಾನ ಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಸಲಹೆ ಪಡೆದಿದ್ದಾರೆ.
ಸಂಸತ್ತಿನಲ್ಲಿ ಅಧಿವೇಶನವನ್ನು ನಿಗಧಿತ ಅವಧಿಗಿಂತ ಮುನ್ನವೇ ಮೊಟಕುಗೊಳಿಸುತ್ತಿದ್ದಾರೆ. ಜನಪ್ರತಿನಿಧಿಗಳ ಆರೋಗ್ಯದ ಹಿತದೃಷ್ಟಿಯಿಂದ ಕಲಾಪವನ್ನು ಮೂರೇ ದಿನಕ್ಕೆ ಸೀಮಿತಗೊಳಿಸೋಣ ಇದರಲ್ಲಿ ಸರ್ಕಾರದ ಪ್ರತಿಷ್ಠೆ ಇಲ್ಲ ಎಂದು ಮನವರಿಕೆ ಮಾಡಿದ್ದಾರೆ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ವೇಳೆ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ಹರಿಸಬೇಕೆಂದು ಸೂಚನೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಲಾಪಕ್ಕಿಂತ ಆರೋಗ್ಯ ಮುಖ್ಯ ಪ್ರತಿ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿವೇಶನವನ್ನು ಮೊಟಕುಗೊಳಿಸಿ ಎಂದು ಹೇಳಿದ್ದಾರೆ.
ಪ್ರಧಾನಿಯವರು ನೀಡಿರುವ ಸೂಚನೆಯನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಯಡಿಯೂರಪ್ಪ ಪ್ರತಿಪಕ್ಷದವರೆಗೂ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಅಲ್ಲದೆ ಒಂದು ಮೂಲದ ಪ್ರಕಾರ ಹಲವು ಸಚಿವರು ಹಾಗೂ ಶಾಸಕರು ಸೇರಿದಂತೆ ಒಟ್ಟು 70 ಮಂದಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಕಲಾಪವನ್ನು ಅರ್ಧಕ್ಕೆ ಸಮಾಪ್ತಿ ಮಾಡುವ ಸಾಧ್ಯತೆಗಳೇ ಹೆಚ್ಚಾಗಿವೆ. ಅಂತಿಮವಾಗಿ ಇಂದು ನಡೆಯಲಿರುವ ಸದನ ಸಲಹಾ ಸಮಿತಿ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ.

