ಮೈಸೂರು: ಮೈಸೂರಿನ(Mysuru) ಚಾಮುಂಡೇಶ್ವರಿ ಕ್ಷೇತ್ರದ ಹಿರಿಯ ಜೆಡಿಎಸ್(JDS) ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ (GT Devegowda) ಅವರು ಸಾರ್ವಜನಿಕ ವೇದಿಕೆಯಲ್ಲೇ ಕಣ್ಣೀರು ಹಾಕಿದ ಪ್ರಸಂಗ ಜರುಗಿದೆ. ತಮ್ಮ ಪುತ್ರ ಹಾಗೂ ಹುಣಸೂರು(Husur) ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಡಿ.
ಹರೀಶ್ ಗೌಡ(GT Harish) ಅವರ ನಡುವಿನ ಕೌಟುಂಬಿಕ ಮತ್ತು ರಾಜಕೀಯ(Politics) ಅಂತರವನ್ನು ನೆನೆದು ಜಿಟಿಡಿ ಬಹಿರಂಗವಾಗಿಯೇ ಅತ್ತಿದ್ದಾರೆ. ವೇದಿಕೆಯಲ್ಲಿ ಕೆಲವೇ ನಿಮಿಷ ಮಾತನಾಡಿದ ಅವರು, ನಂತರ ದುಃಖ ತಡೆಯಲಾರದೆ ಭಾವುಕರಾಗಿ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕಾರ್ಯಕ್ರಮದಿಂದಲೇ ಹೊರನಡೆದಿದ್ದಾರೆ. ಪತ್ನಿಯ ಸನ್ಮಾನ ಕಾರ್ಯಕ್ರಮದಲ್ಲಿ ಜಿಟಿಡಿ ಭಾವುಕ ತಂದೆ-ಮಗನ ನಡುವೆ ಹೆಚ್ಚಿದ ರಾಜಕೀಯ ಅಂತರ ಯಾವಾಗಲೂ ಮೈಸೂರು ಭಾಗದಲ್ಲಿ ಧೀಮಂತ ನಾಯಕರಾಗಿ ಗುರುತಿಸಿಕೊಂಡಿರುವ ಜಿ.ಟಿ. ದೇವೇಗೌಡರು, ಕೌಟುಂಬಿಕ ಹಾಗೂ ರಾಜಕೀಯ ವೇದಿಕೆಗಳಲ್ಲಿ ಮಗನೇ ತಮಗೆ ಎದುರಾಗಿ ನಿಂತಿರುವುದನ್ನು ನೆನೆದು ಇವತ್ತು ಅಭಿಮಾನಿಗಳ ಸಮ್ಮುಖದಲ್ಲೇ ಕಣ್ಣೀರು ಹಾಕಿರುವುದು ಅವರ ಬೆಂಬಲಿಗರಿಗೂ ಬೇಸರ ಮೂಡಿಸಿದೆ. ಇದನ್ನೂಓದಿ: ವಿಧಾನ ಪರಿಷತ್ ಚುನಾವಣೆ, ಜೆಡಿಎಸ್ಗೆ ಎದುರಾಗಿದೆಯೇ ಡಬಲ್ ಚಾಲೆಂಜ್?
ಶಾಸಕ ಜಿ.ಟಿ. ದೇವೇಗೌಡ ಅವರ ಪತ್ನಿ ಕೆ. ಲಲಿತಾ ಅವರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ, ಮೈಸೂರಿನ ಕೆಎಸ್ಒಯು (KSOU) ಘಟಿಕೋತ್ಸವ ಭವನದಲ್ಲಿ ಅಭಿಮಾನಿಗಳು ಲಲಿತಾಭಿನಂದನೆ ಹೆಸರಿನಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಜಿ.ಟಿ. ದೇವೇಗೌಡ ಸೇರಿದಂತೆ ಮಾಜಿ ಉಪಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಖ್ಯಾತ ಹಾಸ್ಯಪ್ರಭಾಷಕ ಪ್ರೊ. ಕೃಷ್ಣೇಗೌಡ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು. ವೇದಿಕೆಯಲ್ಲಿ ಜಿಟಿಡಿ ಅವರ ಇಬ್ಬರು ಪುತ್ರಿಯರು ಹಾಜರಿದ್ದರಾದರೂ, ಪುತ್ರ ಹರೀಶ್ ಗೌಡ ಮಾತ್ರ ಗೈರಾಗಿದ್ದರು. ಈ ವೇಳೆ ಮಗನ ಅನುಪಸ್ಥಿತಿಯನ್ನು ನೆನೆದು ಜಿ.ಟಿ. ದೇವೇಗೌಡರು ಭಾವುಕರಾದರು.
ಕಳೆದ ಕೆಲವು ದಿನಗಳಿಂದ ಶಾಸಕ ಜಿ.ಡಿ. ಹರೀಶ್ ಗೌಡ ಅವರು ತಮ್ಮ ತಂದೆ ಜಿ.ಟಿ. ದೇವೇಗೌಡ ಅವರಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಇತ್ತೀಚೆಗೆ ಹರೀಶ್ ಗೌಡ ನೇತೃತ್ವದಲ್ಲಿ ಹುಣಸೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮಕ್ಕೆ ಸ್ವತಃ ತಂದೆ ಜಿ.ಟಿ. ದೇವೇಗೌಡರಿಗೇ ಆಹ್ವಾನ ನೀಡಿರಲಿಲ್ಲ. ಇದು ಜಿಲ್ಲಾ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೇ ಅಲ್ಲದೆ, ಕ್ಷೇತ್ರದಲ್ಲಿ ಕಳೆದ ಮೂರು ಬಾರಿ ಲಭಿಸಿರುವ ಗೆಲುವು ಕೇವಲ ಪಕ್ಷದ್ದೇ ಹೊರತು ಯಾವುದೇ ವೈಯಕ್ತಿಕ ವ್ಯಕ್ತಿಯದ್ದಲ್ಲ ಎಂದು ಹೇಳುವ ಮೂಲಕ ಹರೀಶ್ ಗೌಡ ಅವರು ತಂದೆ ಜಿಟಿಡಿಯವರಿಗೇ ಚಾಲೆಂಜ್ ಹಾಕಿದ್ದರು. ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲೂ ನಿಮ್ಮ ಆಶೀರ್ವಾದದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಹರೀಶ್ ಗೌಡ ನೀಡಿದ್ದ ಹೇಳಿಕೆ ತಂದೆ-ಮಗನ ನಡುವಿನ ಬಿರುಕನ್ನು ಬಹಿರಂಗಪಡಿಸಿತ್ತು.

