ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಗುಟ್ಕಾನಿಷೇಧದಿಂದ ಅಡಿಕೆ ಬೆಳೆ ಮೇಲೆ ಪರಿಣಾಮ; ಕ್ಯಾಂಪ್ಕೊ, ಬೆಳಗಾರರ ನಿಲುವು ಏನು?
ಒಂದು ಸಾಲಿನಲ್ಲಿರಾಜ್ಯ ಸರ್ಕಾರ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧಿಸಿರುವುದರಿಂದ ಅಡಿಕೆ ಬೆಳೆಗಾರರ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಆತಂಕ ಮತ್ತು ಸರ್ಕಾರದ ಸ್ಪಷ್ಟನೆಯ ಅವಶ್ಯಕತೆ ಕುರಿತ ಲೇಖನವಿದು.
ಪ್ರಮುಖ ಪ್ರಶ್ನೋತ್ತರ
ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಆತಂಕವೇಕೆ?
ಗುಟ್ಕಾ ಮತ್ತು ಪಾನ್ ಮಸಾಲಾದಲ್ಲಿ ಅಡಿಕೆಯನ್ನು ಬಳಸುವುದರಿಂದ, ಈ ಉತ್ಪನ್ನಗಳ ನಿಷೇಧವು ಅಡಿಕೆ ಮಾರುಕಟ್ಟೆ ಹಾಗೂ ಬೆಲೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಆತಂಕ ಬೆಳೆಗಾರರಲ್ಲಿದೆ.
ಕ್ಯಾಂಪ್ಕೊ ಸಂಸ್ಥೆಯ ಬೇಡಿಕೆ ಏನು?
ಸರ್ಕಾರದ ಗುಟ್ಕಾ ನಿಷೇಧದ ಆದೇಶದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷರು ಆಗ್ರಹಿಸಿದ್ದಾರೆ.
ಅಡಿಕೆ ಬೆಳೆಗಾರರ ಸಂಘದ ನಿಲುವೇನು?
ಗುಟ್ಕಾ ನಿಷೇಧವು ಅಡಿಕೆ ನಿಷೇಧವಲ್ಲ ಎಂಬುದನ್ನು ಸರ್ಕಾರ ಜನರಿಗೆ ಮನವರಿಕೆ ಮಾಡಿಕೊಡಬೇಕು ಹಾಗೂ ರೈತರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಂಘವು ಒತ್ತಾಯಿಸಿದೆ.
ಹಿಂದಿನ ಅನುಭವಗಳು ಏನು ಸೂಚಿಸುತ್ತವೆ?
ಹಿಂದೆ 2014ರಲ್ಲಿ ಗುಟ್ಕಾ ನಿಷೇಧ ಜಾರಿಯಾದಾಗ ಅಡಿಕೆ ಬೆಲೆಯಲ್ಲಿ ಕುಸಿತದ ಬದಲು ಏರಿಕೆ ಕಂಡುಬಂದಿತ್ತು, ಆದ್ದರಿಂದ ಮಾರುಕಟ್ಟೆಯ ಬಗ್ಗೆ ಅತಿಯಾದ ಆತಂಕ ಬೇಡ ಎಂದು ಬೆಳೆಗಾರರ ಸಂಘ ತಿಳಿಸಿದೆ.
ಪ್ರಮುಖ ಅಂಕಿಅಂಶಗಳು
8 ಲಕ್ಷ ಹೆಕ್ಟೇರ್ಅಡಿಕೆ ಬೆಳೆಯಲಾಗುವ ಅಂದಾಜು ಪ್ರದೇಶಒಂದು ವರ್ಷಗುಟ್ಕಾ ನಿಷೇಧದ ಅವಧಿ2014ಹಿಂದಿನ ನಿಷೇಧ ಜಾರಿಯಾದ ವರ್ಷ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಬೆಂಗಳೂರು: ದೇಶದಲ್ಲೇ ಅತಿ ಹೆಚ್ಚು ಅಡಿಕೆ ಬೆಳೆಯುವ ರಾಜ್ಯ ಕರ್ನಾಟಕ. ಮತ್ತೊಂದು ಕಡೆ ತಂಬಾಕು ಹಾಗೂ ನಿಕೊಟಿನ್ ಅಂಶ ಇರುವ ಗುಟ್ಕಾ ಹಾಗೂ ಪಾನ್ ಮಸಾಲವನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು, ಇದರಿಂದ ಅಡಿಕೆ ಕೃಷಿ ಹಾಗೂ ಬೆಳೆ ಮೇಲೆ ಪರಿಣಾಮ ಉಂಟಾಗುವ ಆತಂಕವೂ ಎದುರಾಗಿದೆ.
ಈಗಾಗಲೇ ಅಡಿಕೆಗೆ ಉತ್ತಮ ಬೆಳೆ ಸಿಗದೇ ಬೆಳೆಗಾರರು ಆತಂಕದಲ್ಲಿದ್ದಾರೆ. ಈಗ ಅಡಿಕೆ ಉತ್ಪನ್ನವಾಗಿರುವ ಗುಟ್ಕಾ ಹಾಗೂ ಪಾಸ್ ಮಸಾಲ ನಿಷೇಧದಿಂದಲೂ ಬೆಲೆ ಕುಸಿತವಾಗಲಿದೆಯಾ, ಹೆಚ್ಚು ದರ ಸಿಗುತ್ತದೆಯೋ ಇಲ್ಲವೋ ಎನ್ನುವ ಚರ್ಚೆಗಳು ಅಡಿಕೆ ಬೆಳೆಗಾರರ ವಲಯದಲ್ಲಿದೆ.
ಕರ್ನಾಟಕದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಮುಖ್ಯವಾಗಿ ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ತುಮಕೂರು, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಅಡಿಕೆ ಬೆಳೆ ಇದೆ.
ಹಾವೇರಿ, ಹಾಸನ, ಮೈಸೂರು ಸೇರಿದಂತೆ ಕೆಲವು ಭಾಗಗಳಲ್ಲಿ ಈಗ ಅಡಿಕೆ ಬೆಳೆ ವಿಸ್ತರಣೆಗೊಂಡಿದೆ. ಅಂದಾಜು 8 ಲಕ್ಷ ಹೆಕ್ಟೇರ್ನಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.
ಕ್ಯಾಂಪ್ಕೋ ಹೇಳೋದು ಏನು
ಗುಟ್ಕಾ, ಪಾನ್ ಮಸಾಲ ನಿಷೇಧದ ಆದೇಶ ಹಲವು ವರ್ಷದಿಂದ ಅಡಿಕೆ ಬೆಳೆಗಾರರನ್ನು ಬಾಧಿಸುತ್ತಿದೆ. ಮುಂದಿನ ಒಂದು ವರ್ಷದ ಅವಧಿಗೆ ತಂಬಾಕು ಮತ್ತು ನಿಕೊಟಿನ್ ಅಂಶವುಳ್ಳ ಗುಟ್ಕಾ, ಪಾನ್ ಮಸಾಲ ಸಹಿತ ವಿವಿಧ ಉತ್ಪನ್ನಗಳ ನಿಷೇಧದ ಆದೇಶ ಜಾರಿಗೊಳಿಸಿರುವ ಕುರಿತು ಅಡಿಕೆ ಬೆಳೆಗಾರರ ಸಂಘ ಹಾಗೂ ಅಡಿಕೆ ಬೆಳೆಯ ಪ್ರಮುಖ ಸಹಕಾರ ಸಂಸ್ಥೆಯಾಗಿರುವ ಕ್ಯಾಂಪ್ಕೊ ಕೂಡ ಪ್ರತಿಕ್ರಿಯೆ ನೀಡಿದೆ.
ಪುತ್ತೂರಿನಲ್ಲಿರುವ ದಿ ಸೆಂಟ್ರಲ್ ಅರೆಕಾನಟ್ ಆಯಂಡ್ ಕೊಕ್ಕೊ ಮಾರ್ಕೆಟಿಂಗ್ ಆಯಂಡ್ ಪ್ರೊಸೆಸಿಂಗ್ ಕೋ- ಆಪರೇಟಿವ್ ಲಿ. (ಕ್ಯಾಂಪ್ಕೊ) ಸಂಸ್ಥೆ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರು, ತಂಬಾಕು ಮತ್ತು ನಿಕೊಟಿನ್ ಅಂಶವುಳ್ಳ ಉತ್ಪನ್ನ ನಿಷೇಧಿಸಿ ರಾಜ್ಯ ಸರ್ಕಾರ ಪ್ರಕಟಣೆ ಜಾರಿ ಮಾಡಿದ್ದನ್ನು ಗಮನಿಸಿದ್ದೇವೆ. ಈ ಆದೇಶದಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರವೇ ಮುನ್ನೆಚ್ಛರಿಕೆ ವಹಿಸಬೇಕು ಎಂದು ಆಗ್ರಹಿಸುತ್ತಾರೆ.
ಜನರ ಆರೋಗ್ಯದ ಹಿತದೃಷ್ಟಿಯಿಂದ, ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಇಲಾಖೆ ಹೇಳಿದೆ. ಇದು ಸ್ವಾಗತಾರ್ಹವೇ. ಇದರ ನಡುವೆಯೇ ಅಡಿಕೆ ಬೆಳೆಗಾರರ ಹಿತವನ್ನೂ ಕಾಪಾಡುವುದು ಮುಖ್ಯವೇ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಈಗಲೇ ಕ್ರಮ ವಹಿಸಬೇಕು.ಕೃಷಿ ಉತ್ಪನ್ನದ ದುರ್ಬಳಕೆ ಪರಿಣಾಮಗಳಿಗೆ ಅಡಿಕೆ ಬೆಳೆಗಾರರು ಹೊಣೆಗಾರರಾಗಬಾರದು. ಕಾನೂನುಬದ್ಧ ಅಡಿಕೆ ವ್ಯಾಪಾರಕ್ಕೆ ತೊಂದರೆ ಕೊಡಬಾರದು ಎನ್ನುವುದು ಅವರ ಒತ್ತಾಯ.
ಅಡಿಕೆ ಬೆಳಗಾರರ ಸಂಘದ ಸಲಹೆ
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಕೂಡ ಇಂತದೇ ಎಚ್ಚರಿಕೆಯ ಮಾತುಗಳನ್ನು ಆಡುತ್ತಾರೆ.
ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ಮಸಾಲಾ ಉತ್ಪನ್ನಗಳ ಮಾರಾಟ ಹಾಗೂ ವಿತರಣೆಗೆ ಒಂದು ವರ್ಷದ ನಿಷೇಧ ಹೇರಿರುವುದು ಆರೋಗ್ಯದ ದೃಷ್ಟಿಯಿಂದ ಸರಿಯಾಗಿದೆ. ಈ ನಿರ್ಧಾರದಿಂದ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಆಗದಂತೆ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎನ್ನುತ್ತಾರೆ.
ಶತಮಾನಗಳಿಂದಲೂ ಸಾಂಪ್ರದಾಯಿಕ ಕೃಷಿ ಮಾಡಲಾಗುತ್ತಿರುವ ಅಡಿಕೆ ಸಹಸ್ರಾರು ರೈತರಿಗೆ ಆಸರೆಯೂ ಆಗಿದೆ. ಆದರೆ, ಗುಟ್ಕಾ ನಿಷೇಧವೆಂದರೆ ಅಡಿಕೆ ನಿಷೇಧವಲ್ಲ ಎನ್ನುವುದನ್ನು ಜನರಿಗೂ ಸರ್ಕಾರ ಮನದಟ್ಟು ಮಾಡಿಕೊಡಬೇಕು. ಅಡಿಕೆಯ ಕೃಷಿ, ಮಾರುಕಟ್ಟೆ ಮತ್ತು ಬೆಳೆಗಾರರ ಜೀವನೋಪಾಯವನ್ನು ಗಮನಿಸಬೇಕು ಎಂದು ಹೇಳುತ್ತಾರೆ.
ಗುಟ್ಕಾ ನಿಷೇಧದಿಂದ ಮಾರುಕಟ್ಟೆಯಲ್ಲಿ ಅಡಿಕೆ ದರ ಕುಸಿತ ಉಂಟಾಗುತ್ತದೆ ಎನ್ನುವುದೂ ಸರಿಯಲ್ಲ 12 ವರ್ಷದ ಹಿಂದೆಯೂ ಹೀಗೆ ಚರ್ಚೆಯಾಗಿತ್ತು. 2014ರಲ್ಲೂ ದೇಶದ ಹಲವು ರಾಜ್ಯಗಳಲ್ಲಿ ಗುಟ್ಕಾ ನಿಷೇಧ ಜಾರಿಯಾಗಿತ್ತು. ಈ ವೇಳೆ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡಿದ್ದನ್ನೂ ನೋಡಿದ್ದೇವೆ. ಗುಟ್ಕಾ ನಿಷೇಧದ ಪರಿಣಾಮವನ್ನು ಅಡಿಕೆಯ ಮಾರುಕಟ್ಟೆಯೊಂದಿಗೆ ಈಗ ತಳುಕು ಹಾಕುವುದು ಬೇಡ. ಈ ವಿಚಾರದಲ್ಲಿ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗುವ ಅಗತ್ಯವೂ ಇಲ್ಲ ಎನ್ನುತ್ತಾರೆ ಮಹೇಶ್ ಪುಚ್ಚಪ್ಪಾಡಿ ಹಾಗೂ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ವೆಂಕಟಗಿರೀಶ್ .

