ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಮಂಗಳವಾರ 1 ಲಕ್ಷ ಕ್ಯುಸೆಕ್ ದಾಟಿದ್ದು, ಜಲಾಶಯ ಅರ್ಧದಷ್ಟು ತುಂಬಿದೆ. ಇದೇ ಒಳಹರಿವು ನಾಲ್ಕೈದು ದಿನ ಮುಂದುವರಿದರೆ ಜಲಾಶಯದ ನೀರಿನ ಸಂಗ್ರಹ 80 ಟಿಎಂಸಿ ಅಡಿಗೆ ಹೆಚ್ಚಲಿದೆ.
ಗರಿಷ್ಠ 105 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 53.64 ಟಿಎಂಸಿ ಅಡಿ ನೀರಿದೆ. ಮೂರೂ ರಾಜ್ಯಗಳ 8 ಜಿಲ್ಲೆಗಳ ಸುಮಾರು 13 ಲಕ್ಷ ಎಕರೆ ಕೃಷಿ ಭೂಮಿಗೆ ಮೊದಲ ಬೆಳೆಗೆ 90 ಟಿಎಂಸಿ ಅಡಿ ನೀರು ಬೇಕಿದ್ದು, ಒಳಹರಿವು ಅಧಿಕ ಇರುವ ಕಾರಣ ಶೀಘ್ರದಲ್ಲೇ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು ಕಾಲುವೆಗಳಿಗೆ ನೀರು ಹರಿಸುವ ಕುರಿತು ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ.
ಉತ್ತಮವಾಗಿ ಮಳೆ ಸುರಿದ ವರ್ಷ ಜೂನ್ ಅಂತ್ಯದ ವೇಳೆಗೇ ಜಲಾಶಯ ಬಹುತೇಕ ಭರ್ತಿಯಾಗಿ ಜುಲೈ ಮೊದಲ ವಾರದಲ್ಲೇ ಕಾಲುವೆಗಳಿಗೆ ನೀರು ಹರಿಸಲಾಗುತ್ತಿತ್ತು. ಈ ವರ್ಷ ಮಳೆ ವಿಳಂಬದಿಂದಾಗಿ ಒಂದೂವರೆ ತಿಂಗಳಷ್ಟು ತಡವಾಗಿ ಕಾಲುವೆಗಳಿಗೆ ನೀರು ಹರಿಯಲಿದೆ. ಜಲಾಶಯದಲ್ಲಿ 70 ಟಿಎಂಸಿ ಅಡಿ ನೀರು ತುಂಬಿ, ಒಳಹರಿವು 20 ಸಾವಿರ ಕ್ಯುಸೆಕ್ಗಿಂತ ಅಧಿಕ ಇದ್ದರೆ ಮಾತ್ರ ಬೆಳೆಗೆ ನೀರು ಹರಿಸುವ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ, ಇಲ್ಲವಾದರೆ ಅದು ಮತ್ತೆ ವಿಳಂಬವಾಗಬಹದು ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.
ಈ ಮಧ್ಯೆ, ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಬಾಗದಲ್ಲಿ ಮಂಗಳವಾರ ಸಾಧಾರಣೆ ಮಳೆ ಸುರಿದುದು ಬಿಟ್ಟರೆ ಜಿಲ್ಲೆಯ ಇತರೆಡೆ ಮಳೆ ಇಲ್ಲ. ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗಿರುವ ಸೂಚನೆ ಇದ್ದು, ಹೀಗಾದರೆ ಮುಂದಿನ ದಿನಗಳಲ್ಲಿ ಜಲಾಶಯದ ಒಳಹರಿವಿನಲ್ಲೂ ಕಡಿಮೆಯಾಗುವ ಸಾಧ್ಯತೆ ಇದೆ.
ತುಂಗಭದ್ರಾ ಜಲಾಶಯ ಸಮಸ್ಯೆ: ವರದಿ ಸಲ್ಲಿಸಲು ಉನ್ನತ ಸಮಿತಿಯಿಂದ ಸೂಚನೆಹೊಸ ಗೇಟ್ ಖುಷಿ ನುಂಗುತ್ತಿದೆ ಬರಗಾಲ, ತುಂಗಭದ್ರಾ ಜಲಾಶಯ ಬರಿದು
