'ಲವ್ ಮಾಕ್ಟೇಲ್-3' ಕದ್ದಕಥೆ ಎಂದು ನಿರ್ದೇಶಕ ರಾಘವೇಂದ್ರ ಎಂ. ನಾಯ್ಕ್ ಅವರು ಆರೋಪ ಮಾಡಿದ್ದರು. ಇದೀಗ, ಅವರ ಹೇಳಿಕೆಗೆ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.ನಿರ್ದೇಶಕ ರಾಘವೇಂದ್ರ ಎಂ. ನಾಯ್ಕ್ ಅವರು 'ಲವ್ ಮಾಕ್ಟೇಲ್-3' ಚಿತ್ರದ ದ್ವಿತೀಯಾರ್ಧವು ನಮ್ಮ ಕಥೆಯ ಹಂದರವನ್ನೇ ಹೊಂದಿದೆ' ಎಂದು ಕೆಲ ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಕೃಷ್ಣ- ಮಿಲನಾ, 'ಲವ್ ಮಾಕ್ಟೇಲ್ ಚಿತ್ರಕ್ಕಾಗಿ ಆರಂಭದಿಂದ ಇಲ್ಲಿಯವರೆಗೂ ನಾವೆಷ್ಟು ಶ್ರಮ ಹಾಕಿದ್ದೀವಿ ಅಂಥ ನಮಗೆ ಮಾತ್ರ ಗೊತ್ತಿದೆ. ಪ್ರಾಮಾಣಿಕವಾಗಿ ಅಷ್ಟು ಶ್ರಮ ಹಾಕಿದ್ದಕ್ಕೆ ಜನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈಗ ಯಾರೋ ಬಂದು ಈ ಚಿತ್ರಕಥೆ ಬಗ್ಗೆ ಹೀಗೆ ಮಾತನಾಡಿದರೆ, ಬರಹಗಾರನಿಗೆ ಮಾಡುವ ಅತೀ ದೊಡ್ಡ ಅವಮಾನ. ಕಥೆ ವಿಚಾರಕ್ಕೆ ನಮ್ಮ ಮೇಲೆ ವಿನಾ ಕಾರಣ ಆರೋಪ ಮಾಡುತ್ತಿರುವವರು 'ಯಾವ ಬರಹಗಾರರಿಗೂ ಅನ್ಯಾಯ ಆಗಬಾರದು' ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ. ನಾನು ನಿರ್ದೇಶಕ ಆಗುವ ಮೊದಲು ನಾನೊಬ್ಬ 'ಬರಹಗಾರ' ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.
'4 ವರ್ಷದಿಂದ ಈ ಸಿನಿಮಾಕ್ಕಾಗಿ ಕಥೆ ಬರೆದಿದ್ದೇವೆ. ಇದಾದ ಬಳಿಕವೇ ನಾನು ನಿರ್ದೇಶಕ ಆಗಿರೋದು. ಗೂಗಲ್ನಲ್ಲಿ ಸಿಗುವ ಕಥೆಯನ್ನು ನನ್ನ ಕಥೆ ಎಂದು ಅವರು ಹೇಳಿಕೊಂಡು ಓಡಾಡುತ್ತಿದ್ದಾರೆ. ಮುಂಬರುವ ನಿಮ್ಮ ಚಿತ್ರಕ್ಕೆ ಪ್ರಮೋಷನ್ ಅವಶ್ಯಕತೆ ಇದೆ ಅಂಥ ನಮಗೆ ಗೊತ್ತಿದೆ. ಆದರೆ, ನಮ್ಮ ಸಿನಿಮಾದ ಮೂಲಕ ನಿಮ್ಮ ಚಿತ್ರದ ಪ್ರಚಾರ ಯಾಕೆ ಮಾಡಿಕೊಳ್ಳುತ್ತೀರಾ.? ಎಂದಿದ್ದಾರೆ.
2010ರಿಂದ ಮೊದಲ ಬಾರಿ ಈ ರೀತಿಯ ಸುದ್ದಿಗೋಷ್ಠಿ ಮಾಡುತ್ತಿರೋದು. ನಮ್ಮ ಸಿನಿಮಾ ತುಂಬಾ ಯಶಸ್ವಿಯಾಗಿದೆ. ಅದನ್ನು ಸಂಭ್ರಮಿಸುವುದು ಬಿಟ್ಟು ಇವರ ಆರೋಪಕ್ಕೆ ಉತ್ತರ ಕೊಡುತ್ತಿದ್ದೇವೆ' ಎಂದರು.
'ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ನಿರ್ದೇಶಕ ಗುರುದೇಶ್ ಪಾಂಡೆ ಹಾಗೂ ರಾಘವೇಂದ್ರ ಎಂ. ನಾಯ್ಕ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಇದರಲ್ಲಿ ರಾಜಿ ಸಂಧಾನ ಆಗುವ ಮಾತೇ ಇಲ್ಲ. ಇಂಥವರಿಗೆ ಹೀಗೆ ಉತ್ತರ ಕೊಡಬೇಕು' ಎಂದು ಹೇಳಿದ್ದಾರೆ.

