Dailyhunt Logo
  • Light mode
    Follow system
    Dark mode
    • Play Story
    • App Story
ನಾಡ ಬಾಂಬ್‌ಗಳು ಕೆಲಸ ಮಾಡುವುದು ಹೇಗೆ? ತುಮಕೂರು ದುರಂತದ ವಿವರಣೆ ಇಲ್ಲಿದೆ

ನಾಡ ಬಾಂಬ್‌ಗಳು ಕೆಲಸ ಮಾಡುವುದು ಹೇಗೆ? ತುಮಕೂರು ದುರಂತದ ವಿವರಣೆ ಇಲ್ಲಿದೆ

ತುಮಕೂರು ಜಿಲ್ಲೆಯ ಹೆದ್ದಾರಿಯಲ್ಲಿ ನಡೆದ ಒಂದು ದುರಂತಮಯ ಘಟನೆಯಲ್ಲಿ, ಚಲಿಸುತ್ತಿದ್ದ ಕ್ಯಾಬ್ ಒಳಗೆ ನಡೆದ ಭೀಕರ ಸ್ಫೋಟದಲ್ಲಿ ಓರ್ವ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ, ಅಂಕೋಲಾದ ಟಿ. ನಾಗೇಂದ್ರ ಎನ್ನುವ 28 ವರ್ಷದ ಯುವಕ ಸಾವಿಗೀಡಾಗಿದ್ದು, ಆತ ಒಂದು ನಾಡ ಬಾಂಬ್ ಸಾಗಿಸುತ್ತಿದ್ದ ಎನ್ನಲಾಗಿದೆ.

ಸ್ಫೋಟ ನಡೆಯುವ ಕೆಲವೇ ಕ್ಷಣಗಳ ಮುನ್ನ, ಆತ ತನ್ನ 24 ವರ್ಷದ ಸಹಯೋಗಿ ಯು ರಮ್ಯಾ ನಾಯಕ್ ಅವರನ್ನು ಚಾಕುವಿನಿಂದ ಇರಿದು, 'ನಾವಿಬ್ಬರೂ ಜೊತೆಯಾಗಿ ಸಾಯೋಣ' ಎಂದಿದ್ದ ಎಂದು ವರದಿಗಳು ಹೇಳುತ್ತವೆ. ಆ ಮಹಿಳೆ ಮತ್ತು ಕ್ಯಾಬ್ ಚಾಲಕ ಇಬ್ಬರೂ ಕೊನೆಯ ಕ್ಷಣದಲ್ಲಿ ಪಾರಾಗಲು ಸಾಧ್ಯವಾಗಿದ್ದರೂ, ಕಾರ್‌ಗೆ ಬೆಂಕಿ ಬಿದ್ದ ತಕ್ಷಣ ನಾಗೇಂದ್ರ ಅಲ್ಲೇ ಸಾವಿಗೀಡಾದ. ಒಂದಷ್ಟು ಗಾಯಗೊಂಡಿದ್ದ ರಮ್ಯಾ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಒಂದು ದೀರ್ಘಾವಧಿಯ ಪ್ರೇಮ ವಿವಾದದ ಕಾರಣದಿಂದ ಈ ಘಟನೆ ಶನಿವಾರ ನಡೆದಿದೆ ಎನ್ನಲಾಗಿದೆ. ನಾಗೇಂದ್ರ ಮತ್ತು ರಮ್ಯಾ ಕಳೆದ ಆರು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದಾರೆ. ನಾಗೇಂದ್ರ ಆಕೆಯನ್ನು ತನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದು, ರಮ್ಯಾ ನಾಗೇಂದ್ರನಿಂದ ದೂರಾಗಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. ರಮ್ಯಾ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ಕೊಠಡಿಯ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ದುರ್ಘಟನೆ ನಡೆದ ದಿನ, ನಾಗೇಂದ್ರ ಜಯನಗರ ಬಳಿಯ ಬೈರಸಂದ್ರದಲ್ಲಿರುವ ರಮ್ಯಾಳ ಬಾಡಿಗೆ ಮನೆಗೆ ತೆರಳಿದ್ದ ಎನ್ನಲಾಗಿದೆ. ಆತ ಚಾಕು ತೋರಿಸಿ ರಮ್ಯಾಳನ್ನು ಬೆದರಿಸಿ, ಅಂಕೋಲಾಗೆ ತೆರಳುವ ಕ್ಯಾಬ್ ಒಂದಕ್ಕೆ ಹತ್ತಿಸಿದ್ದ.

ಈ ಘಟನೆಯಿಂದ ಗಾಬರಿಗೊಂಡ ರಮ್ಯಾಳ ರೂಮ್ ಮೇಟ್ ನಯನಾ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ, ಕ್ಯಾಬನ್ನು ಪತ್ತೆಹಚ್ಚಿ, ಕ್ಯಾಬ್ ಚಾಲಕ ಪ್ರವೀಣನನ್ನು ಸಂಪರ್ಕಿಸಿ, ಕ್ಯಾಬನ್ನು ಸನಿಹದ ಪೊಲೀಸ್ ಸಹಾಯ ಕೇಂದ್ರದ ಬಳಿ ನಿಲ್ಲಿಸುವಂತೆ ಸೂಚಿಸಿದರು. ಈ ಮಾತುಕತೆಗಳನ್ನು ಕೇಳಿಸಿಕೊಂಡ ನಾಗೇಂದ್ರ ಕೋಪಗೊಂಡಿದ್ದ. ಚಲಿಸುತ್ತಿದ್ದ ವಾಹನದ ಒಳಗೇ ಒಂದು ಜಗಳ ನಡೆಯಿತು. ಡ್ರೈವರ್ ಬೆಂಗಳೂರಿನಿಂದ ಅಂದಾಜು 90 ಕಿಲೋಮೀಟರ್ ದೂರದಲ್ಲಿರುವ, ಸಿರಾ ತಾಲೂಕಿನ ಕಳ್ಳಂಬೆಳ್ಳ ಎನ್ನುವಲ್ಲಿ ಕಾರ್ ನಿಲ್ಲಿಸಿದ. ರಮ್ಯಾ ಮತ್ತು ಡ್ರೈವರ್ ಕೊನೆ ಕ್ಷಣದಲ್ಲಿ ಕಾರಿನಿಂದ ಹೊರಗೆ ಜಿಗಿದಿದ್ದಾರೆ. ಕೆಲವೇ ಸೆಕೆಂಡುಗಳ ಒಳಗೆ ಕ್ಯಾಬ್‌ನಲ್ಲಿ ಭಾರೀ ಸ್ಫೋಟ ಸಂಭವಿಸಿ, ನಾಗೇಂದ್ರ ತಕ್ಷಣವೇ ಸಾವಿಗೀಡಾಗಿದ್ದಾನೆ.

ಪ್ರೇಯಸಿ ಜೊತೆ ಜಗಳ, ಕಾರಿನಲ್ಲಿ ನಾಡಬಾಂಬ್‌ ಸ್ಫೋಟಿಸಿದ ಯುವಕ: ಸಜೀವ ದಹನ

ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆವಿ ಅವರು ವಿಧಿವಿಜ್ಞಾನ ತಜ್ಞರು ಜಾಗರೂಕವಾಗಿ ಅಪಘಾತ ಸ್ಥಳದ ಪರಿಶೀಲನೆ ನಡೆಸುತ್ತಿದ್ದು, ಅದು ನಿಜಕ್ಕೂ ಯಾವ ರೀತಿಯ ಸ್ಫೋಟ, ಹೇಗೆ ನಡೆಯಿತು ಎನ್ನುವುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ. ನಾಗೇಂದ್ರ ಒಂದು ಕಚ್ಚಾ, ಅಭಿವೃದ್ಧಿ ಪಡಿಸಿರುವ ಸ್ಫೋಟಕ ವಸ್ತುವನ್ನು ಹೊಂದಿರುವ ಸಾಧ್ಯತೆಗಳಿದ್ದು, ಅದನ್ನು ಕಂಟ್ರಿ ಬಾಂಬ್ ಅಥವಾ ನಾಡ ಬಾಂಬ್ ಎಂದು ಕರೆಯಲಾಗುತ್ತದೆ.

ಹಾಗಾದರೆ, ಈ ಸ್ಥಳೀಯವಾಗಿ ನಿರ್ಮಿಸಿದ ಸ್ಫೋಟಕ ಎಂದರೇನು? ಸರಳವಾಗಿ ವಿವರಿಸುವುದಾದರೆ, ಇದೊಂದು ಅನಧಿಕೃತ ಮತ್ತು ಅಕ್ರಮವಾಗಿ ನಿರ್ಮಿಸಿರುವ ಬಾಂಬ್ ಆಗಿದ್ದು, ಇದನ್ನು ಸುಲಭವಾಗಿ ಲಭಿಸುವ ಉಪಕರಣಗಳನ್ನು ಬಳಸಿ ನಿರ್ಮಿಸಲಾಗುತ್ತದೆ. ಸರಿಯಾದ ಮಿಲಿಟರಿ ಅಥವಾ ಕಾರ್ಖಾನೆ ನಿರ್ಮಿತ ಸ್ಫೋಟಕಗಳಂತಲ್ಲದೆ, ಈ ಸ್ಫೋಟಕಗಳು ಕಚ್ಚಾ ರೀತಿಯಲ್ಲಿ ಜೋಡಿಸಲ್ಪಟ್ಟಿದ್ದು, ಅತ್ಯಂತ ಅಸ್ಥಿರವಾಗಿರುತ್ತವೆ ಮತ್ತು ಅತ್ಯಂತ ಅಪಾಯಕಾರಿಯಾಗಿವೆ. ಅವುಗಳು ವಿಶೇಷ ರಾಸಾಯನಿಕಗಳನ್ನು ಹೊಂದಿದ್ದು, ಟ್ರಿಗರ್ ಮಾಡಿದಾಗ ಅಪಾರ ಪ್ರಮಾಣದ ಶಕ್ತಿಯನ್ನು ಬಿಡುಗಡೆಗೊಳಿಸುತ್ತವೆ. ಇದು ಬಿಸಿಯಾದ ಅನಿಲವಾಗಿ ಪರಿವರ್ತನೆಗೊಳ್ಳುವ ಸ್ಫೋಟಕವಾಗಿದ್ದು, ಅತ್ಯಂತ ಬಲವಾದ ಸ್ಫೋಟದ ಅಲೆಗಳನ್ನು, ಭಾರೀ ಶಬ್ದವನ್ನು ಮತ್ತು ಎಲ್ಲೆಡೆಗೂ ಹಾರುವ ತುಣುಕುಗಳನ್ನು ಸೃಷ್ಟಿಸುತ್ತದೆ. ಇವುಗಳನ್ನು ಯಾವುದೇ ಸರಿಯಾದ ನಿಯಂತ್ರಣಗಳಿಲ್ಲದೆ ನಿರ್ಮಿಸುವುದರಿಂದ, ಇವುಗಳನ್ನು ಎಲ್ಲಿಗಾದರೂ ಸಾಗಿಸುವಾಗ, ಅಥವಾ ನಿರ್ವಹಿಸುವಾಗಲೂ ಸ್ಫೋಟಿಸಬಹುದು. ಆದ್ದರಿಂದಲೇ ಪೊಲೀಸರು ಮತ್ತು ತಜ್ಞರು ಸ್ಫೋಟದ ಸ್ಥಳಗಳನ್ನು ಬಹಳ ಜಾಗರೂಕವಾಗಿ ಪರಿಶೀಲಿಸುತ್ತಾರೆ.

ಭಾರತದಲ್ಲಿ ಇಂತಹ ಬಹಳಷ್ಟು ದೇಶೀಯ ನಿರ್ಮಾಣದ ಬಾಂಬ್‌ಗಳು ದೈನಂದಿನ ಜೀವನದಲ್ಲಿ ಲಭಿಸುವ, ವಿಶೇಷವಾಗಿ ಕೃಷಿ ಮತ್ತು ಉದ್ಯಮಗಳಲ್ಲಿ ಬಳಸುವ ಸಾಮಾನ್ಯ ವಸ್ತುಗಳಿಂದ ನಿರ್ಮಿತವಾಗುತ್ತವೆ. ಇವುಗಳಲ್ಲಿ ಅತ್ಯಂತ ಸಾಮಾನ್ಯವೆಂದರೆ ಅಮೋನಿಯಂ ನೈಟ್ರೇಟ್ ಎನ್ನುವ ಒಂದು ರೀತಿಯ ರಸಗೊಬ್ಬರವಾಗಿದ್ದು, ಇದನ್ನು ಡೀಸೆಲ್‌ನಂತಹ ಸಾಮಾನ್ಯ ಇಂಧನದೊಡನೆ ಬೆರೆಸಿದಾಗ ಅತ್ಯಂತ ಗಂಭೀರ ಸ್ಫೋಟಕವಾಗುತ್ತದೆ. ಈ ಸಂಯೋಜನೆಯನ್ನು ಎಎನ್‌ಎಫ್‌ಒ ಎಂದು ಕರೆಯಲಾಗಿದ್ದು, ಇದು ದೇಶಾದ್ಯಂತ ಬಹಳಷ್ಟು ಸ್ಫೋಟಗಳ ತನಿಖೆಗಳಲ್ಲಿ ಕಂಡುಬಂದಿದೆ. ಇತರ ರಾಸಾಯನಿಕಗಳ ಪೈಕಿ ಪೊಟಾಸಿಯಂ ನೈಟ್ರೇಟ್ ಅಥವಾ ಪೊಟ್ಯಾಸಿಯಮ್‌ ಕ್ಲೋರೇಟ್ ಮುಖ್ಯವಾಗಿದ್ದು, ಇವುಗಳನ್ನು ಸಾಮಾನ್ಯವಾಗಿ ಗಂಧಕ, ಅಲ್ಯೂಮಿನಿಯಂ ಪುಡಿ, ಅಥವಾ ಇದರಂತಹ ವಸ್ತುಗಳಿಂದ ನಿರ್ಮಿಸಲಾಗುತ್ತದೆ. ಇವೆಲ್ಲ ಕಡಿಮೆ ಮಟ್ಟದ ಸ್ಫೋಟಕಗಳಾಗಿದ್ದರೂ, ಸಣ್ಣ ಪ್ರದೇಶಗಳಿಗೆ ಹೆಚ್ಚು ತೀವ್ರತೆ ಹೊಂದಿರುತ್ತವೆ. ಕೆಲವು ಬಾರಿ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಇತರ ವಸ್ತುಗಳು, ಯೂರಿಯಾ, ಅಥವಾ ಇಂಧನ ತೈಲವನ್ನು ಬೆರೆಸಿ ಬಳಸಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಪ್ರಬಲ ಮಿಲಿಟರಿ ಗುಣಮಟ್ಟದ ವಸ್ತುಗಳಾದ ಆರ್‌ಡಿಎಕ್ಸ್‌ಗಳನ್ನು ಬಳಸಿ, ಸ್ಫೋಟ ಇನ್ನಷ್ಟು ವಿಧ್ವಂಸಕವಾಗಿ ನಿರ್ಮಿಸಲಾಗುತ್ತದೆ.

ಈ ರಾಸಾಯನಿಕಗಳು ಸಾಮಾನ್ಯವಾಗಿ ಸಾಮಾನ್ಯವಾಗಿ ರಸಗೊಬ್ಬರಗಳನ್ನು ತಯಾರಿಸಲು, ಅಥವಾ ಇತರ ವಸ್ತುಗಳನ್ನು ಉತ್ಪಾದಿಸಲು ಬಳಕೆಯಾಗುತ್ತವೆ. ಆದರೆ, ಅವುಗಳನ್ನು ದುರ್ಬಳಕೆ ಮಾಡಿದಾಗ ಅಪಾಯಕಾರಿ ಆಯುಧಗಳೂ ಆಗಬಲ್ಲವು. ತುಮಕೂರಿನಲ್ಲಿ ನಡೆದ ಕ್ಯಾಬ್ ಸ್ಫೋಟವೂ ಇಂತಹ ವಸ್ತುಗಳು ಕೆಟ್ಟ ವ್ಯಕ್ತಿಗಳ ಕೈಗೆ ಸೇರಿದಾಗ ವೈಯಕ್ತಿಕ ವಿವಾದಗಳಾದಾಗ ಎಷ್ಟರಮಟ್ಟಿಗೆ ದುರಂತಗಳನ್ನು ಉಂಟುಮಾಡಬಲ್ಲವು ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಭಾರತೀಯ ಅಧಿಕಾರಿಗಳು ಇಂತಹ ಸ್ಫೋಟಕಗಳ ದುರ್ಬಳಕೆಯನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಅಮೋನಿಯಂ ನೈಟ್ರೇಟ್ ಅನ್ನು ಸ್ಫೋಟಕ ಕಾಯ್ದೆ ಮತ್ತು 2012ರ ವಿಶೇಷ ಕಾಯ್ದೆಗಳಡಿ ನಿರ್ಬಂಧಿಸಲಾಗಿದೆ. ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ರಾಸಾಯನಿಕಗಳ ಆನ್‌ಲೈನ್ ವ್ಯಾಪಾರ ಮತ್ತು ಅಂಗಡಿಗಳಲ್ಲಿ ಇಂತಹ ರಾಸಾಯನಿಕಗಳು ಸುಲಭವಾಗಿ ಲಭಿಸದಂತೆ ಮಾಡಲು ಕ್ರಮ ಕೈಗೊಳ್ಳುತ್ತಾರೆ. ವಿಧಿವಿಜ್ಞಾನ ತಂಡಗಳು ಇಂತಹ ಪ್ರತಿಯೊಂದು ಘಟನೆಯ ಬಳಿಕದ ತನಿಖೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಅವು ಘಟನೆಯಲ್ಲಿ ಅಳಿದುಳಿದ ವಸ್ತುಗಳನ್ನು ಅನ್ವೇಷಿಸಿ, ಸ್ಫೋಟ ಹೇಗೆ ಸಂಭವಿಸಿತು ಎಂದು ಪತ್ತೆಹಚ್ಚುತ್ತವೆ.

ಇಂತಹ ಸ್ಫೋಟಗಳು ಕೇವಲ ಪ್ರಾಣ ಹರಣ ಮಾಡುವುದು ಮಾತ್ರವಲ್ಲದೆ, ಕುಟುಂಬಗಳನ್ನೂ ನಾಶಪಡಿಸುತ್ತವೆ. ತುಮಕೂರಿನ ಪ್ರಕರಣದಲ್ಲಿ, ಒಂದು ಪ್ರೇಮಕಥೆ ಅನಿರೀಕ್ಷಿತ ನಷ್ಟದ ರೂಪ ಪಡೆದುಕೊಂಡಿದೆ. ರಮ್ಯಾ ಚಿಕಿತ್ಸೆ ಪಡೆಯುತ್ತಿದ್ದರೆ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಅಪಾಯಕಾರಿ ವಸ್ತುಗಳ ಕುರಿತು ಕಟ್ಟುನಿಟ್ಟಿನ ಪರಿಶೀಲನೆ ಜಾರಿಗೆ ತರುವ ಅನಿವಾರ್ಯತೆಯನ್ನು ಪ್ರದರ್ಶಿಸಿದ್ದು, ನಮ್ಮ ಪಟ್ಟಣಗಳು, ಹೆದ್ದಾರಿಗಳಲ್ಲೂ ಹೆಚ್ಚಿನ ಜಾಗರೂಕತೆ ವಹಿಸಬೇಕಿದೆ.

ಕ್ಷಿಪ್ರ ಪೊಲೀಸ್ ಪ್ರತಿಕ್ರಿಯೆ, ಸಾರ್ವಜನಿಕ ಜಾಗೃತಿ, ಸಾರ್ವಜನಿಕ ಎಚ್ಚರ, ಮತ್ತು ರಾಸಾಯನಿಕಗಳ ಉತ್ತಮ ನಿಯಂತ್ರಣ ಅಪಾಯವನ್ನು ತಡೆಗಟ್ಟಲು ನೆರವಾಗಬಹುದು ಎಂದು ತಜ್ಞರು ಹೇಳಿದ್ದಾರೆ. ತುಮಕೂರಿನ ಪ್ರಕರಣ ವೈಯಕ್ತಿಕ ಕೋಪ ಮತ್ತು ಅಸುರಕ್ಷಿತ ಉಪಕರಣಗಳು ಹೇಗೆ ಗಂಭೀರ ಸಮಸ್ಯೆ ತಂದೊಡ್ಡಬಲ್ಲವು ಎನ್ನುವುದನ್ನು ತೋರಿಸಿಕೊಟ್ಟಿವೆ. ಮುಂದಿನ ದಿನಗಳಲ್ಲಿ ಇಂತಹ ಹೃದಯ ವಿದ್ರಾವಕ ಘಟನೆಗಳು ನಡೆಯದಂತೆ ತಡೆಯುವ ಕಠಿಣ ನಿಯಮಗಳು ಜಾರಿಗೆ ಬರಲಿ ಎಂದು ನಾವು ಆಶಿಸೋಣ.

Dailyhunt
Disclaimer: This content has not been generated, created or edited by Dailyhunt. Publisher: Prajavani