ಬಾಲಿವುಡ್ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾ ಟ್ರೇಲರ್ ಜುಲೈ 24 ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮಾಯಣದಲ್ಲಿ ನಟಿಸುತ್ತಿರುವ ನಟ ಹಾಗೂ ನಟಿಯರು ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಚಿತ್ರದ ಪ್ರಮುಖ ತಾರಾಗಣ ರಣಬೀರ್ ಕಪೂರ್, ಸಾಯಿ ಪಲ್ಲವಿ, ರಾಕಿಂಗ್ ಸ್ಟಾರ್ ಯಶ್, ಕುನಾಲ್ ಕಪೂರ್, ರವಿ ದುಬೆ, ಕುಮಾರ್ ವಿಶ್ವಾಸ್ ಮತ್ತು ಅರುಣ್ ಗೋವಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಂತಹ ಭಾರತೀಯ ಮಹಾಕಾವ್ಯದ ಪೌರಾಣಿಕ ಪಾತ್ರಗಳಿಗೆ ಬಣ್ಣ ಹಚ್ಚಲು ಸಿಕ್ಕ ಅವಕಾಶದ ಬಗ್ಗೆ ಚಿತ್ರತಂಡದವರು ವೇದಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸೀತಾ ದೇವಿ ಪಾತ್ರಕ್ಕೆ ಸಾಯಿ ಪಲ್ಲವಿ ಏಕೆ? ಹಿರಿಯ ನಟ ಅನ್ನು ಕಪೂರ್ ಆಕ್ಷೇಪ'ರಾಮಾಯಣ'ದ ಸೀತೆ ಪಾತ್ರದ ಬಗ್ಗೆ ಮನದಾಳ ಹಂಚಿಕೊಂಡ ನಟಿ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ ಅವರು ರಾಮಾಯಣ ಸಿನಿಮಾದಲ್ಲಿ ಸೀತಾ ಮಾತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಉಡುಪಿನಲ್ಲಿ ಬಂದ ನಟಿಯ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅದರಲ್ಲೂ ಫೋಟೊ ಹಾಗೂ ವಿಡಿಯೊಗಳನ್ನು ನೋಡಿದ ಅಭಿಮಾನಿಗಳು ನಟಿಯ ಲುಕ್ಗೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೇ ನಿಜವಾಗಲೂ ಮುಖದಲ್ಲಿ ಸೀತಾ ಮಾತೆಯ ಕಳೆ ಎದ್ದು ಕಾಣುತ್ತಿದೆ ಎಂದು ಹಾಡಿ ಹೊಗಳುತ್ತಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

ನಟಿ ಸಾಯಿ ಪಲ್ಲವಿ
ಇನ್ನು, ದೆಹಲಿಯ ಕಾರ್ಯಕ್ರಮಕ್ಕಾಗಿ ಅವರು ತೊಟ್ಟುಕೊಂಡ ಗುಲಾಬಿ ಮತ್ತು ಚಿನ್ನದ ಬಣ್ಣದ ಕಾಂಜೀವರಂ ಸೀರೆ ನೆರೆದಿದ್ದವರ ಗಮನ ಸೆಳೆಯಿತು. ತೀರಾ ಆಡಂಬರವಿಲ್ಲದಿದ್ದರೂ ಅವರ ಲುಕ್ಗೆ ಪೂರಕವಾಗಿ ಟೆಂಪಲ್ ಜ್ಯುವೆಲ್ಲರಿ ಧರಿಸಿದ್ದರು. ಬಲಗೈಗೆ ಬಂಗಾರ ಬಣ್ಣದ ಬಳೆಗಳು ಹಾಗೂ ಎಡಗೈಯಲ್ಲಿ ಜಪಮಾಲೆಯನ್ನು ಹಾಕಿಕೊಂಡಿದ್ದರು. ಹಣೆಯ ಮೇಲಿನ ಕೆಂಪು ಬಿಂದಿ ಹಾಗೂ ಸಾಂಪ್ರದಾಯಿಕ ಜುಮುಕಿ ಮತ್ತಷ್ಟು ಮೆರುಗು ನೀಡಿತ್ತು.

ನಟಿ ಸಾಯಿ ಪಲ್ಲವಿ
ಸೀತಾ ಮಾತೆಯ ಪಾತ್ರ ನನಗೆ ಸಿಕ್ಕ ಆಶೀರ್ವಾದ..
ಕಾರ್ಯಕ್ರಮದಲ್ಲಿ ಸೀತೆಯ ಪಾತ್ರದ ಕುರಿತು ಭಾವುಕರಾಗಿ ಮಾತನಾಡಿದ ಸಾಯಿ ಪಲ್ಲವಿ, 'ನಟರಿಗೆ ಇಂತಹ ಪಾತ್ರಗಳು ಸುಲಭವಾಗಿ ಸಿಗುವುದಿಲ್ಲ. ಏಕೆಂದರೆ ಒಬ್ಬ ದೇವತೆಯ ಪಾತ್ರವನ್ನು ಬೆಳ್ಳಿತೆರೆಯ ಮೇಲೆ ಜೀವಿಸುವುದು ಅಷ್ಟು ಸುಲಭವಲ್ಲ' ಎಂದರು.
'ನಾನು ಸೀತಾ ಮಾತೆಯ ಪಾತ್ರವನ್ನು ಆರಿಸಿಕೊಂಡಿದ್ದಲ್ಲ. ಬದಲಿಗೆ ಆ ಪಾತ್ರವನ್ನು ಮಾಡಲು ನನಗೆ ಆಶೀರ್ವಾದ ಸಿಕ್ಕಿದೆ. ಇದು ನಾವು ಬೆನ್ನಟ್ಟಿ ಹೋಗಿ ಪಡೆಯುವಂತಹ ಪಾತ್ರವಲ್ಲ. ನಾನು ಶೂಟಿಂಗ್ ಸಮಯದಲ್ಲಿ ಧ್ಯಾನಸ್ಥಳಾಗಿ ಕುಳಿತು, ಸೀತಾ ಮಾತೆ, ನೀನೇ ನನ್ನ ಮೂಲಕ ನಟಿಸು. ನನ್ನಿಂದ ಏನೇ ಮೂಡಿಬಂದರೂ ಅದು ಈ ಚಿತ್ರಕ್ಕಾಗಿ ನೀನು ಬಯಸಿದ್ದೇ ಆಗಿರಲಿ ಎಂದು ಪ್ರಾರ್ಥಿಸುತ್ತಿದ್ದೆ. ಬೆಳ್ಳಿತೆರೆಯ ಮೇಲೆ ನನ್ನ ಪಾತ್ರ ಚೆನ್ನಾಗಿ ಮೂಡಿ ಬರಲು, ನನ್ನ ಆಲೋಚನೆಗಳನ್ನು ಆದಷ್ಟು ಶುದ್ಧವಾಗಿಟ್ಟುಕೊಳ್ಳಲು ನಾನು ಸದಾ ಪ್ರಯತ್ನಿಸುತ್ತಿದ್ದೆ' ಎಂದು ಸಾಯಿ ಪಲ್ಲವಿ ತಿಳಿಸಿದರು.

ದೊಡ್ಡ ತಾರಾಗಣದ ಸಿನಿಮಾ
ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತಾ ದೇವಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಹಾಗೂ ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಉಳಿದಂತೆ ಲಕ್ಷ್ಮಣನಾಗಿ ರವಿ ದುಬೆ, ಕೈಕೇಯಿಯಾಗಿ ಲಾರಾ ದತ್ತಾ, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್, ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ಮತ್ತು ದಶರಥ ಮಹಾರಾಜನಾಗಿ ಅರುಣ್ ಗೋವಿಲ್ ನಟಿಸುತ್ತಿದ್ದಾರೆ. ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ ಮತ್ತು ಮೋಹಿತ್ ರೈನಾ ಕೂಡ ಚಿತ್ರದ ಭಾಗವಾಗಿದ್ದಾರೆ.

