ನವದೆಹಲಿ: ಹಿಂದುತ್ವವಾದಿ ನಾಯಕ ವಿನಾಯಕ ದಾಮೋದರ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನಹಾನಿ ದೂರು ಹಾಗೂ ವಿಚಾರಣಾ ನ್ಯಾಯಾಲಯದ ಸಮನ್ಸ್ ಅನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಪಡಿಸಿದೆ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಶೀಲ್ ನಾಗು ಅವರಿದ್ದ ಪೀಠ, ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲು ಅಗತ್ಯವಿದ್ದ ಕಾನೂನುಬದ್ಧ ಅನುಮೋದನೆ ಪಡೆಯಲಾಗಿಲ್ಲ ಎಂದು ಹೇಳಿತು.
2022ರ ನವೆಂಬರ್ 17ರಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಭಾರತ್ ಜೋಡೊ ಯಾತ್ರೆಯ ವೇಳೆ ಸಾವರ್ಕರ್ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಈ ಪ್ರಕರಣಕ್ಕೆ ಕಾರಣವಾಗಿತ್ತು.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153ಆ ಅಡಿ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಇಂತಹ ಪ್ರಕರಣವನ್ನು ಪರಿಗಣಿಸಲು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿ.ಆರ್.ಪಿ.ಸಿ) ಸೆಕ್ಷನ್ 196ರ ಅಡಿ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯವಾಗಿದೆ. ಆದರೆ, ಅನುಮೋದನೆ ಪಡೆದಿರುವ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿರುವುದನ್ನು ಕೋರ್ಟ್ ಗಮನಿಸಿತು.
ಅಮಿತ್ ಶಾ ಉಪದೇಶ ಕೇಳಲು ನಮಗೆ ಆಸಕ್ತಿಯಿಲ್ಲ: ರಾಹುಲ್ ಗಾಂಧಿ'ಸ್ವಾತಂತ್ರ್ಯ ಹೋರಾಟಗಾರರನ್ನು ಅಪಹಾಸ್ಯ ಮಾಡಬೇಡಿ'
ಈ ಹಿಂದೆ ಸಾವರ್ಕರ್ ಕುರಿತು ಮಹಾರಾಷ್ಟ್ರದ ರ್ಯಾಲಿಯಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಸುಪ್ರೀಂ ಕೋರ್ಟ್ 'ಬೇಜವಾಬ್ದಾರಿ' ಎಂದು ಟೀಕಿಸಿತ್ತು. 'ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಹಾಸ್ಯ ಮಾಡಬೇಡಿ ಎಂದು ಕೋರ್ಟ್ ಹೇಳಿ, ಅವರ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು.
ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠವು 2025ರ ಏಪ್ರಿಲ್ 4ರಂದು ರಾಹುಲ್ ಗಾಂಧಿ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿತ್ತು. ವಿಚಾರಣಾ ನ್ಯಾಯಾಲಯದ ಸಮನ್ಸ್ ಪ್ರಶ್ನಿಸಿ ಸೆಷನ್ಸ್ ಕೋರ್ಟ್ನಲ್ಲಿ ರಿವಿಷನ್ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.
ಸಾವರ್ಕರ್ ಅವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಮೂಲಕ ಅವರ ಮಾನಹಾನಿ ಮಾಡಲು ರಾಹುಲ್ ಗಾಂಧಿ 'ಪೂರ್ವಯೋಜಿತ ಸಂಚು' ನಡೆಸಿದ್ದಾರೆ ಎಂದು ದೂರುದಾರ ವಕೀಲ ನೃಪೇಂದ್ರ ಪಾಂಡೆ ಆರೋಪಿಸಿದ್ದರು.
ಧೈರ್ಯಶಾಲಿ ಗೃಹ ಸಚಿವ ಅಮಿತ್ ಶಾ ಸದನಕ್ಕೆ ಏಕೆ ಬರುತ್ತಿಲ್ಲ? ರಾಹುಲ್ ಗಾಂಧಿ
