ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತು ಮುಂದುವರಿದಿದ್ದು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಗುರುವಾರವೂ ಭೇಟಿಯಾಗಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚಿಸಲು ಆಹ್ವಾನಿಸುವಂತೆ ವಿಜಯ್ ಅವರು ರಾಜ್ಯಪಾಲರನ್ನು ಕೋರಿದ್ದಾರೆ.
ಇದು 24 ತಾಸಿನೊಳಗೆ ಎರಡನೇ ಭೇಟಿಯಾಗಿದೆ. ಆದರೆ ಸರ್ಕಾರ ರಚಿಸಲು ವಿಜಯ್ ಅವರನ್ನು ಆಹ್ವಾನಿಸಲಾಗುತ್ತದೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ದೊರಕಿಲ್ಲ.
ಲೋಕಭವನದಲ್ಲಿ ರಾಜ್ಯಪಾಲರೊಂದಿಗೆ ಸುಮಾರು 40 ನಿಮಿಷಗಳ ಕಾಲ ವಿಜಯ್ ಚರ್ಚಿಸಿದ್ದಾರೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 108 ಸ್ಥಾನಗಳಲ್ಲಿ ಗೆದ್ದಿರುವ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ನ ಐವರು ಶಾಸಕರ ಬೆಂಬಲದ ಹೊರತಾಗಿಯೂ ಬಹುಮತಕ್ಕೆ ಬೇಕಾಗಿರುವ ಅಧಿಕೃತ ಸಂಖ್ಯಾಬಲದ ಕೊರತೆಯಿದೆ.
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ಸಂಖ್ಯೆ 118 ಆಗಿದೆ.
ಬುಧವಾರ ಕಾಂಗ್ರೆಸ್ ಪಕ್ಷದ ಬೆಂಬಲ ಪತ್ರವನ್ನು ಸಲ್ಲಿಸಿ ಸರ್ಕಾರ ರಚಿಸಲು ಹಕ್ಕು ಪತ್ರ ಮಂಡಿಸಿದ್ದರು. ಆದರೆ ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲದ ದಾಖಲೆಯನ್ನು ಗವರ್ನರ್ ಕೇಳಿದ್ದರು.
234 ಸದಸ್ಯ ಬಲದ ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಮೇ 4ರಂದು ಫಲಿತಾಂಶ ಪ್ರಕಟಗೊಂಡಿತ್ತು. ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4, ವಿಸಿಕೆ, ಐಯುಎಂಎಲ್, ಸಿಪಿಐ ಮತ್ತು ಸಿಪಿಐ(ಎಂ) ತಲಾ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ಪಕ್ಷಗಳು ತಲಾ 1 ಸ್ಥಾನ ಪಡೆದುಕೊಂಡಿವೆ.
ವಿಜಯ್ ಸರ್ಕಾರ ರಚಿಸಲಿ, 6 ತಿಂಗಳು ತೊಂದರೆ ಕೊಡುವುದಿಲ್ಲ: ಎಂ.ಕೆ. ಸ್ಟಾಲಿನ್ಡಿಎಂಕೆ ಮೈತ್ರಿ ತೊರೆದು ವಿಜಯ್ 'ಕೈ' ಹಿಡಿದ ಕಾಂಗ್ರೆಸ್: ಏನಿದು ಬದಲಾದ ರಾಜಕೀಯ?

