ಬೆಂಗಳೂರು: ಲೈಂಗಿಕ ಕಿರುಕುಳ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದು, ಮೇ14ರಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಬಳಿಕ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.
ದೇವೇಗೌಡರ ಮನೆಗೆ ಭೇಟಿ ಕುಟುಂಬಸ್ಥರ ಜೊತೆ ಕೆಲಕಾಲ ಮಾತನಾಡಿದ ಬಳಿಕ ಬಸವನಗುಡಿಯಲ್ಲಿರುವ ಕಾರಂಜಿ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.
ನಾನು ಪ್ರಕರಣದ ಬಗ್ಗೆ ಹೆಚ್ಚಿ ಏನು ಹೇಳಲು ಹೋಗುವುದಿಲ್ಲ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದ್ದು, ನ್ಯಾಯಾಂಗವನ್ನ ನಾನು ಗೌರವಿಸುತ್ತೇನೆ. ನನಗೆ ದೇವರ ಮೇಲೆಯೂ ನಂಬಿಕೆ ಇದೆ. ಈ ಆಪಾದನೆಯಿಂದ ಹೊರ ಬರುತ್ತೇನೆ. 11 ದಿನದ ನ್ಯಾಯಾಂಗದ ಆದೇಶ ಪಾಲಿಸಿದ್ದೇನೆ. ಉಳಿದ ಯಾವುದಕ್ಕೂ ರಿಯಾಕ್ಟ್ ಮಾಡಲ್ಲ ಎಂದು ಹೇಳಿದ್ದಾರೆ.

