ಕೋಲ್ಕತ: 17ನೇ ಆವೃತ್ತಿ ಐಪಿಎಲ್ ಆರಂಭವಾಗುವುದಕ್ಕೂ ಮುನ್ನ ನಾಯಕತ್ವ ಸೇರಿದಂತೆ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡಿದ್ದ ಮುಂಬೈ ಇಂಡಿಯನ್ಸ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ. 2025ರಲ್ಲಿ ನಡೆಯುವ 18ನೇ ಆವೃತ್ತಿಯ ಐಪಿಎಲ್ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಆಡುವುದಿಲ್ಲ ಎಂದು ಹೇಳಲಾಗಿದ್ದು, ಈ ವಿಚಾರಕ್ಕೆ ಇಂಬು ನೀಡುವಂತೆ ಕೋಲ್ಕತ ವಿರುದ್ಧದ ಪಂದ್ಯಗಳಲ್ಲಿ ಹಲವು ಘಟನೆಗಳು ನಡೆದಿವೆ.
ಮೇ 11ರಂದು ಪಂದ್ಯ ಶುರುವಾಗುವುದಕ್ಕೂ ಮುನ್ನ ಕೋಲ್ಕತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಮಾತುಕತೆಯಲ್ಲಿ ತೊಡಗಿದ್ದ ವಿಡಿಯೋ ವೈರಲ್ ಆಗಿತ್ತು. ಈ ವೇಳೆ ರೋಹಿತ್ ಆಡಿದ ಮಾತುಗಳು ಕ್ರೀಡಾ ವಲಯದಲ್ಲಿ ಹೊಸ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಇದೀಗ ಇದಕ್ಕೆ ಪೂರಕವೆಂಬಂತೆ ಮತ್ತೊಂದು ಘಟನೆ ನಡೆದಿದೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರ್ಸಿಬಿ-ಡೆಲ್ಲಿ ಪಂದ್ಯಕ್ಕೆ ಮಳೆ ಭೀತಿ; ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿ ಉಭಯ ತಂಡಗಳು
ವೈರಲ್ ಆಗಿರುವ ಫೋಟೋ ನೋಡುವುದಾದರೆ ಕೆಕೆಆರ್ ಡಗೌಟ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅಭಿಷೇಕ್ ನಾಯರ್ ಸೇರಿದಂತೆ ಇನ್ನಿತರರ ಜೊತೆ ಮಾತುಕತೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಇದಕ್ಕೂ ಮುಂಚಿತವಾಗಿ ಅಭಿಷೇಕ್ ಜೊತೆ ಮಾತನಾಡುತ್ತಾ, ಎಲ್ಲವೂ ಒಂದೊಂದಾಗಿ ಬದಲಾಗುತ್ತಿದೆ. ಏನೇ ಆದರೂ ಅದು ನನ್ನ ಮನೆ. ಆ ಗುಡಿಯನ್ನು ಕಟ್ಟಿದ್ದು ನಾನು. ಈಗ ನಂಗೇನಾಗಬೇಕು ನನ್ನದು ಇದುವೇ ಲಾಸ್ಟ್ ಎಂದು ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೋಹಿತ್ ಶರ್ಮಾ ಮುಂಬರುವ ಆವೃತ್ತಿಯಲ್ಲಿ ಕಲ್ಕತ್ತಾ ಸೇರಲಿದ್ದಾರೆ ಎಂಬ ಮಾತಿಗೆ ಜೀವ ಬಂದಂತಾಗಿದೆ.
ಇನ್ನೂ ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್, ನನ್ನ ಪ್ರಕಾರ ಮುಂದಿನ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಮುಂಬೈ ಬದಲು ಕೆಕೆಆರ್ ಪರ ಆಡುವುದು ಸೂಕ್ತ ಎಂದು ಭಾವಿಸುತ್ತೇನೆ. ಏಕೆಂದರೆ ಗೌತಮ್ ಗಂಭೀರ್ ಮೆಂಟರಿಂಗ್, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಉತ್ತಮ ತಂಡವನ್ನು ಕಟ್ಟಬಹುದಾಗಿದೆ. ಯಾವುದೇ ಪಿಚ್ ಆದರೂ ಉತ್ತಮವಾಗಿ ಆಟವಾಡುವ ರೋಹಿತ್ ಶರ್ಮಾ ಮುಂದಿನ ಆವೃತ್ತಿಯಲ್ಲಿ ಕೋಲ್ಕತ ಪರ ಆಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

