ನವದೆಹಲಿ: ಬೆಂಗಳೂರು-ಹೈದರಾಬಾದ್, ಬೆಂಗಳೂರು-ಚೆನ್ನೈ ಸೇರಿದಂತೆ ದೇಶದ ವಿವಿಧ ನಗರಗಳ ನಡುವಿನ ಸಂಪರ್ಕ ಸೌಲಭ್ಯವನ್ನು ಇನ್ನಷ್ಟು ವೃದ್ಧಿಸಲು ದೇಶದಾದ್ಯಂತ ಏಳು ಹೊಸ ಹೈಸ್ಪೀಡ್ ರೈಲ್ವೆ ಕಾರಿಡಾರ್ಗಳನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಲಿದೆ.
ಈ ಕುರಿತು ಅದು 2026-27ರ ಬಜೆಟ್ನಲ್ಲಿ ಪ್ರಕಟಿಸಿದೆ.
ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಚೆನ್ನೈ, ದೆಹಲಿ-ವಾರಾಣಸಿ, ವಾರಾಣಸಿ-ಸಿಲಿಗುರಿ ನಡುವೆಯೂ ಹೈಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸುವ ಕುರಿತು ಉಲ್ಲೇಖಿಸಲಾಗಿದೆ. ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವುದು ಇದರ ಉದ್ದೇಶ.
'ಪರಿಸರ-ಸುಸ್ಥಿರ ಪ್ರಯಾಣದ ವ್ಯವಸ್ಥೆಯನ್ನು ಉತ್ತೇಜಿಸಲು ಈ ಏಳು ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದು ವಿವಿಧ ನಗರಗಳ ನಡುವೆ ಸಂಪರ್ಕವನ್ನು ಇನ್ನಷ್ಟು ವೃದ್ಧಿಸಲು ಸಹಕಾರಿ ಆಗಲಿವೆ' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದರು.
ಪ್ರಸ್ತುತ, ಅಹಮದಾಬಾದ್ ಮತ್ತು ಮುಂಬೈ ನಡುವೆ ಒಂದು ಹೈಸ್ಪೀಡ್ ಕಾರಿಡಾರ್ನ ಕಾಮಗಾರಿ ಪ್ರಗತಿಯಲ್ಲಿದೆ.
ಸರಕು ಸಾಗಣೆಗೆ ಪ್ರತ್ಯೇಕ ಕಾರಿಡಾರ್: ಪಶ್ಚಿಮ ಬಂಗಾಳದ ಡಂಕುನಿ ಮತ್ತು ಗುಜರಾತ್ನ ಸೂರತ್ ನಡುವೆ ಸರಕು ಸಾಗಣೆಗೆ ಮೀಸಲಾದ ಕಾರಿಡಾರ್ ಅಭಿವೃದ್ಧಿಪಡಿಸಲಾಗುವುದು ಎಂದೂ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಸ್ತುತ ಸರಕು ಸಾಗಣೆಗೆಂದೇ ಮೀಸಲಾದ ಎರಡು ಕಾರಿಡಾರ್ಗಳು ಕಾರ್ಯನಿರ್ವಹಿಸುತ್ತಿದ್ದು, ಅವು ದೇಶದ ಪೂರ್ವ ಮತ್ತು ಪಶ್ಚಿಮದ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳನ್ನು ಸಂಪರ್ಕಿಸುತ್ತಿವೆ.
ಹೆದ್ದಾರಿ ಸಚಿವಾಲಯಕ್ಕೆ ₹3.09 ಕೋಟಿ: ರಸ್ತೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಈ ಬಾರಿ ₹3.09 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ 8ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ₹1.87 ಲಕ್ಷ ಕೋಟಿ ಹಂಚಲಾಗಿದೆ.
ವಿಮಾನ ತಯಾರಿಕೆಗೆ ಕಸ್ಟಮ್ಸ್ ಸುಂಕ ವಿನಾಯಿತಿ: ನಾಗರಿಕ, ತರಬೇತಿ ಮತ್ತು ಇತರ ವಿಮಾನಗಳ ತಯಾರಿಕೆಗೆ ಅಗತ್ಯವಿರುವ ಘಟಕಗಳು ಮತ್ತು ಬಿಡಿ ಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ಬಜೆಟ್ನಲ್ಲಿ ವಿನಾಯಿತಿ ಘೋಷಿಸಲಾಗಿದೆ. ಅಲ್ಲದೆ ರಕ್ಷಣಾ ವಲಯದ ಘಟಕಗಳಿಂದ ನಿರ್ವಹಣೆ, ದುರಸ್ತಿಗೆ ಬಳಸಲಾಗುವ ವಿಮಾನದ ಭಾಗಗಳ ತಯಾರಿಕೆಗಾಗಿ ಆಮದು ಮಾಡಿಕೊಳ್ಳುವ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕಕ್ಕೂ ವಿನಾಯಿತಿ ನೀಡಲಾಗಿದೆ.
ಸರ್ಕಾರದ ಬೊಕ್ಕಸಕ್ಕೆ ಪ್ರತಿ ರೂಪಾಯಿ ಆದಾಯದಲ್ಲಿ 64 ಪೈಸೆ ತೆರಿಗೆಯಿಂದಲೇ ಸಂಗ್ರಹ!Union Budget: ನರೇಗಾದಿಂದ ಕೈಬಿಟ್ಟಿದ್ದ 'ಮಹಾತ್ಮ ಗಾಂಧಿ' ಹೆಸರಲ್ಲಿ ಹೊಸ ಯೋಜನೆUnion Budget 2026: ಎಂಸಿಎಕ್ಸ್ ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಕುಸಿತUnion Budget 2026; ಬಜೆಟ್ ಮುಖ್ಯಾಂಶಗಳುಬೆಂಗಳೂರು ಸಬ್ ಅರ್ಬನ್ಗೆ ₹500 ಕೋಟಿ
ಬೆಂಗಳೂರು ಸಬ್ ಅರ್ಬನ್ ಯೋಜನೆಗೆ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ₹500 ಕೋಟಿ ಒದಗಿಸಲಾಗಿದೆ. ಕಳೆದ ವರ್ಷ ₹350 ಕೋಟಿ ಹಂಚಿಕೆ ಮಾಡಲಾಗಿತ್ತು.
ಒಟ್ಟಾರೆ ರೈಲ್ವೆ ಸಚಿವಾಲಯಕ್ಕೆ ಈ ಬಾರಿ ₹2,77,830 ಕೋಟಿ ಹಂಚಿಕೆ ಮಾಡಲಾಗಿದೆ. ಇದು ಕಳೆದ ಬಜೆಟ್ಗಿಂತ ₹25,830 ಕೋಟಿ ಹೆಚ್ಚು. ಇದಲ್ಲದೆ ಹೆಚ್ಚುವರಿ ಬಜೆಟ್ ಸಂಪನ್ಮೂಲಗಳಿಂದ ₹ 15,000 ಕೋಟಿ ಒದಗಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.
ಪ್ರಸಕ್ತ ವರ್ಷ ಹೊಸ ರೈಲ್ವೆ ಮಾರ್ಗಗಳಿಗೆ ₹36,722 ಕೋಟಿ, ದ್ವಿಪಥ ಹಳಿ ನಿರ್ಮಾಣಕ್ಕೆ ₹37,750 ಕೋಟಿ, ರೈಲ್ವೆ ಬೋಗಿ ಸೇರಿದಂತೆ ರೋಲಿಂಗ್ ಸ್ಟಾಕ್ಗೆ ₹52,109 ಕೋಟಿ, ಹಳಿ ನವೀಕರಣಕ್ಕೆ ₹22,853 ಕೋಟಿ, ರೈಲ್ವೆ ಮೇಲ್ಸೇತುವೆ, ಕೆಳಸೇತುವೆಗೆ ₹8,225 ಕೋಟಿ, ಸಿಗ್ನಲಿಂಗ್ ಮತ್ತು ಟೆಲಿಕಾಂಗೆ ₹7,500 ಕೋಟಿ, ವಿದ್ಯುದೀಕರಣ ಯೋಜನೆಗೆ ₹ 5,000 ಕೋಟಿ, ಗೇಜ್ ಪರಿವರ್ತನೆಗೆ ₹4,600 ಕೋಟಿ ಹಂಚಿಕೆ ಮಾಡಲಾಗಿದೆ.
4,000 ಕಿ.ಮೀ ವ್ಯಾಪ್ತಿ, ₹16,000 ಕೋಟಿ ಹೂಡಿಕೆ
ಬಜೆಟ್ನಲ್ಲಿ ಘೋಷಿಸಲಾಗಿರುವ ಏಳು ಹೈಸ್ಪೀಡ್ ರೈಲ್ವೆ ಕಾರಿಡಾರ್ಗಳು ದೇಶದ ವಿವಿಧ ಭಾಗಗಳನ್ನು ಸಂರ್ಪಕಿಸಲಿದ್ದು, ಒಟ್ಟು 4,000 ಕಿ.ಮೀನಷ್ಟು ವ್ಯಾಪ್ತಿ ಹೊಂದಿರಲಿವೆ. ಇವು ಸುಮಾರು ₹16,000 ಕೋಟಿಯಷ್ಟು ಹೂಡಿಕೆಯನ್ನು ಆಕರ್ಷಿಸುತ್ತವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರು- ಚೆನ್ನೈ-ಹೈದರಾಬಾದ್ ಕಾರಿಡಾರ್ಗಳು ದಕ್ಷಿಣ ರಾಜ್ಯಗಳಲ್ಲಿ ಹೈಸ್ಪೀಡ್ 'ಟ್ರೈಯಾಂಗಲ್' ಅನ್ನು ರೂಪಿಸಲಿವೆ. ಇದರಿಂದ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ ಪ್ರಯೋಜನವಾಗಲಿದೆ ಎಂದರು.
ಚೆನ್ನೈ-ಬೆಂಗಳೂರು, ಬೆಂಗಳೂರು- ಹೈದರಾಬಾದ್ ಮತ್ತು ಚೆನ್ನೈ- ಹೈದರಾಬಾದ್ ನಡುವಿನ ಪ್ರಯಾಣದ ಅವಧಿಯು ಕ್ರಮವಾಗಿ 1.13 ಗಂಟೆ, 2 ಗಂಟೆ ಹಾಗೂ 2.55 ಗಂಟೆಗೆ ತಗ್ಗಲಿದೆ ಎಂದು ಅವರು ವಿವರಿಸಿದರು.
ಹಾಗೆಯೇ ಮುಂಬೈ- ಪುಣೆ ನಡುವಿನ ಪ್ರಯಾಣ 48 ನಿಮಿಷಕ್ಕೆ, ಪುಣೆ- ಹೈದರಾಬಾದ್ ನಡುವಿನ ಪ್ರಯಾಣ 1.55 ಗಂಟೆಗೆ, ವಾರಾಣಸಿ- ಸಿಲಿಗುರಿ ನಡುವಿನ ಪ್ರಯಾಣ 2.55 ಗಂಟೆಗೆ, ದೆಹಲಿ- ವಾರಾಣಸಿ ನಡುವಿನ ಪ್ರಯಾಣದ ಅವಧಿ 3.50 ಗಂಟೆಗೆ ಇಳಿಯಲಿದೆ ಎಂದರು.


