Dailyhunt
ಮಮತಾ  ಬ್ಯಾನರ್ಜಿ ಅವರನ್ನು ಸೋಲಿಸಿದ್ದಕ್ಕೆ ನನ್ನ ಆಪ್ತನ ಕೊಲೆ: ಸುವೇಂದು

ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದಕ್ಕೆ ನನ್ನ ಆಪ್ತನ ಕೊಲೆ: ಸುವೇಂದು

ಕೋಲ್ಕತ್ತ: 'ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದಕ್ಕೆ ನನ್ನ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಕೊಲೆಗೈಯಲಾಗಿದೆ' ಎಂದು ಬಿಜೆಪಿಯ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯಲ್ಲಿ ಚಂದ್ರನಾಥ್ ರಥ್ ಅವರನ್ನು ಬುಧವಾರ ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.

'ಇದೊಂದು ಪೂರ್ವಯೋಜಿತ ಕೃತ್ಯ. ಇದನ್ನು ನಾವು ಎಷ್ಟೇ ಖಂಡಿಸಿದರೂ ಸಾಲದು. ಚಂದ್ರನಾಥ್ ರಥ್ ನನ್ನ ಸಹಾಯಕ. ಭವಾನಿಪುರದಲ್ಲಿ ಮಮತಾ ಅವರನ್ನು ಸೋಲಿಸಿದ್ದಕ್ಕಾಗಿ ಕೊಲೆ ಮಾಡಲಾಗಿದೆ' ಎಂದು ಸುವೇಂದು ಆರೋಪಿಸಿದ್ದಾರೆ.

ರಾಜಕೀಯ ವಿವಾದಕ್ಕೆ ತಿರುಗಿದ ಸುವೇಂದು ಸಹಾಯಕನ ಹತ್ಯೆ: ಬಿಜೆಪಿ-ಟಿಎಂಸಿ ವಾಗ್ಯುದ್ಧಸುವೇಂದು ಆಪ್ತ ಚಂದ್ರನಾಥ್ ರಥ್ ಹತ್ಯೆ: ಆರೋಪಿಗಳ ಪತ್ತೆಗೆ ವಿಶೇಷ ತಂಡಗಳ ರಚನೆ

'ತಪ್ಪಿತ್ತಸ್ಥರನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು ಎಂಬುದು ಕುಟುಂಬದ ಬೇಡಿಕೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ನಾಲ್ಕು ಗುಂಡುಗಳನ್ನು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ' ಎಂದಿದ್ದಾರೆ.

(ಪಿಟಿಐ ಚಿತ್ರ)

ಸರಿಯಾದ ದಿಕ್ಕಿನಲ್ಲಿ ತನಿಖೆ...

ಇದೇ ಸಂದರ್ಭದಲ್ಲಿ ಚಂದ್ರನಾಥ್ ರಥ್ ಅವರ ಹತ್ಯೆ ಪ್ರಕರಣದಲ್ಲಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ತನಿಖಾಧಿಕಾರಿಗಳ ಮೇಲೆ ನಂಬಿಕೆಯಿದೆ ಎಂದು ಅವರು ಹೇಳಿದ್ದಾರೆ.

'ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ನಾನು ಡಿಜಿಪಿ ಜೊತೆ ಮಾತನಾಡಿದ್ದೇನೆ. ಅವರಿಗೆ ಸುಳಿವು ಸಿಕ್ಕಿದೆ. ಕೆಲವು ಶಂಕಿತರನ್ನು ಬಂಧಿಸಲಾಗಿದೆ. ಸಿಐಡಿ, ವಿಧಿವಿಜ್ಞಾನ, ಎಸ್‌ಐಟಿ ಹಾಗೂ ಪೊಲೀಸರು ಸರಿಯಾದ ದಿಕ್ಕಿನಲ್ಲಿದ್ದಾರೆ' ಎಂದು ಹೇಳಿದ್ದಾರೆ.

ಹತ್ಯೆ ಪ್ರಕರಣ ಸಿಬಿಐಗೆ ವಹಿಸಬೇಕು ಎಂಬ ಟಿಎಂಸಿ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, 'ಟಿಎಂಸಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ. ಪ್ರಕರಣವನ್ನು ಪೊಲೀಸರೇ ಬೇಧಿಸುತ್ತಾರೆ' ಎಂದು ತಿಳಿಸಿದ್ದಾರೆ.

ಬುಧವಾರ ರಾತ್ರಿ ಸುಮಾರು 10.30ರ ಹೊತ್ತಿಗೆ ಮಧ್ಯಮ್‌ಗ್ರಾಮ್ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ರಥ್ ಅವರ ಕಾರನ್ನು ಅಡ್ಡಗಟ್ಟಿ ಗುಂಡಿಕ್ಕಿ ಕೊಲೆಗೈದಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani