ಕಾಠ್ಮಂಡು: ಭಾರತದ ಭೂಪ್ರದೇಶಗಳನ್ನು ತನ್ನ ದೇಶವು 'ಅತಿಕ್ರಮಣ' ಮಾಡುತ್ತಿರುವ ಬಗ್ಗೆ ತಿಳಿದುಬಂದಿದೆ ಎಂದು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಭಾನುವಾರ ಹೇಳಿದ್ದಾರೆ.
ಗಡಿ ವಿವಾದದ ಕುರಿತು ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವಾಗ ಅವರು ಈ ವಿಷಯ ತಿಳಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಅವರು, ವಿವಾದ ಇತ್ಯರ್ಥಕ್ಕೆ ಇತಿಹಾಸಕಾರರು, ಅಧಿಧಿಕಾರಿಗಳು ಮತ್ತು ತಜ್ಞರ ಸಹಾಯವನ್ನು ಪಡೆಯಲು ಭಾರತ ಮತ್ತು ನೇಪಾಳ ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ. ಅಲ್ಲದೆ ಈ ವಿಷಯವನ್ನು ಚೀನಾ ಮತ್ತು ಯುನೈಟೆಡ್ ಕಿಂಗ್ಡಮ್ ಜೊತೆಯೂ ಪ್ರಸ್ತಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಪ್ರದೇಶಗಳ ಕುರಿತು ನೇಪಾಳ ಮತ್ತು ಭಾರತದ ನಡುವೆ ಹಳೆಯ ಗಡಿ ವಿವಾದವಿದ್ದು, ಎರಡೂ ದೇಶಗಳು ಈ ಪ್ರದೇಶಗಳ ಮೇಲೆ ಹಕ್ಕು ಸಾಧಿಸುತ್ತಿವೆ. ಈ ಪ್ರದೇಶಗಳು ಉತ್ತರಾಖಂಡದ ಭಾಗವಾಗಿವೆ ಎಂದು ಭಾರತ ಪ್ರತಿಪಾದಿಸುತ್ತಿದ್ದು, ದ್ವಿಪಕ್ಷೀಯ ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿದೆ.
ನೇಪಾಳ ಪ್ರಧಾನಿಯ ಈ ಹೇಳಿಕೆಗೆ ಭಾರತದಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
'ಲಿಪುಲೇಖ್ ಸೇರಿದಂತೆ ಭಾರತದಿಂದ ಪ್ರದೇಶಗಳ ಅತಿಕ್ರಮಣದ ವಿಷಯವನ್ನು ಉಲ್ಲೇಖಿಸಿ ನೇಪಾಳ ಸರ್ಕಾರವು ಅಧಿಕೃತವಾಗಿ ಭಾರತಕ್ಕೆ ರಾಜತಾಂತ್ರಿಕ ಪತ್ರವನ್ನು ಕಳುಹಿಸಿದೆ ಮತ್ತು ನಾವು ಈಗಾಗಲೇ ಅವರ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದೇವೆ. ಇತಿಹಾಸಕಾರರು, ಸರ್ವೇಕ್ಷಣಾಧಿಕಾರಿಗಳು ಮತ್ತು ಸಂಬಂಧಪಟ್ಟ ತಜ್ಞರ ಸಹಾಯದಿಂದ ರಾಜತಾಂತ್ರಿಕ ಮಾರ್ಗಗಳ ಮೂಲಕ ಒಟ್ಟಿಗೆ ಕುಳಿತು ಸಮಸ್ಯೆಯನ್ನು ಪರಿಹರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ' ಎಂದು ಹೇಳಿದ್ದಾರೆ.
'ಇತ್ತೀಚೆಗೆ, ಪ್ರಧಾನಿಯಾದ ನಂತರವಷ್ಟೇ ನನಗೆ ತಿಳಿದುಬಂದ ಸತ್ಯವೊಂದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಭಾರತವು ಕೇವಲ ನೇಪಾಳದ ಪ್ರದೇಶಗಳನ್ನು ಅತಿಕ್ರಮಣ ಮಾಡಿಲ್ಲ, ನೇಪಾಳ ಕೂಡ ಹಲವು ಕಡೆಗಳಲ್ಲಿ ಭಾರತದ ಪ್ರದೇಶಗಳನ್ನು ಅತಿಕ್ರಮಣ ಮಾಡಿದೆ. ಈಗ ಎರಡೂ ದೇಶಗಳು ಸತ್ಯಾಸತ್ಯತೆಗಳನ್ನು ಅಧ್ಯಯನ ಮಾಡಬೇಕು, ಸ್ನೇಹಿತರಂತೆ ಒಟ್ಟಿಗೆ ಕುಳಿತು ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.
ನೇಪಾಳ: ಬಾಲೇಂದ್ರ ಶಾ ಪ್ರಮಾಣ
