ಹೊರ್ಮುಜ್ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸಿರುವ ಇರಾನ್, ಜಾಗತಿಕ ಹಡಗು ಸಂಚಾರದ ಮತ್ತೊಂದು ಪ್ರಮುಖ ಮಾರ್ಗವಾದ 'ಬಬ್-ಎಲ್-ಮಂಡೇಬ್'ನತ್ತ ಚಿತ್ತಹರಿಸಿದೆ. ಇದು ಜಾಗತಿಕ ಇಂಧನ ಮತ್ತು ಪೂರೈಕೆ ಸರಪಳಿ ಮೇಲೆ ಇನ್ನಷ್ಟು ಗಂಭೀರ ಪರಿಣಾಮಗಳನ್ನು ಬೀರುವ ಆತಂಕ ಹೆಚ್ಚಿಸಿದೆ.
ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಇರಾನ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಮಾತನಾಡಿ, ಹೊರ್ಮುಜ್ ರೀತಿಯಲ್ಲೇ ಬಬ್-ಎಲ್-ಮಂಡೇಬ್ ಜಲಸಂಧಿ ಸ್ಥಗಿತಗೊಳಿಸುವ ಇರಾದೆ ಹೊಂದಿರುವುದಾಗಿ ಹೇಳಿಕೆ ನೀಡಿದ್ದಾರೆ.
ವಿಶ್ವದ ಅತ್ಯಂತ ಪ್ರಮುಖ ತೈಲ ಕಾರಿಡಾರ್ಗಳಲ್ಲಿ ಒಂದಾದ ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಮುಂದುವರಿಸುತ್ತಿದೆ. ಇದು ಅಂತರರಾಷ್ಟ್ರೀಯ ಹಡಗು ಸಂಚಾರದ ಮೇಲೆ ಒತ್ತಡ ಹೆಚ್ಚಿಸಿದೆ ಮತ್ತು ವೆಚ್ಚ ಹೆಚ್ಚಾಗುವಂತೆ ಮಾಡಿದೆ.
ಇರಾನ್ ಬೆಂಬಲಿತ ಯೆಮನ್ನ 'ಹೂಥಿ' ಬಂಡುಕೋರರು 'ಬಬ್-ಎಲ್-ಮಂಡೇಬ್' ಜಲಸಂಧಿಯ ಮೂಲಕ ನಡೆಯುವ ಹಡಗು ಸಂಚಾರಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಜಾಗತಿಕ ವ್ಯಾಪಾರದ ಶೇಕಡ 12ರಷ್ಟು ಭಾಗ ಈ ಮಾರ್ಗದ ಮೂಲಕವೇ ನಡೆಯುತ್ತದೆ. ಒಂದು ವೇಳೆ ಈ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ್ದಲ್ಲಿ ಭಾರತದ ಮೇಲೆ ಏನೆಲ್ಲಾ ಪರಿಣಾಮಗಳು ಬೀರಬಹುದು ಎಂಬುದನ್ನು ತಿಳಿಯೋಣ...
ಇರಾನ್ ಬೆಂಬಲಿಸಿ 'ಹೂಥಿ' ಬಂಡುಕೋರರು ಯುದ್ಧದಲ್ಲಿ ಮುಂದುವರಿದರೆ, ಬಬ್-ಎಲ್-ಮಂಡೇಬ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಸ್ಥಗಿತಗೊಳ್ಳಬಹುದು. ಇದು ಈಗಾಗಲೇ ಏರಿಕೆಯಾಗಿರುವ ತೈಲ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
ಹೊರ್ಮುಜ್ ಜಲಸಂಧಿಯು ಭಾರತದ ಇಂಧನ ಆಮದಿಗೆ ಮುಖ್ಯವಾಗಿದ್ದರೆ, ಕೆಂಪು ಸಮುದ್ರದ ಮಾರ್ಗವು ಭಾರತದ ರಫ್ತಿಗೆ (ಮುಖ್ಯವಾಗಿ ಯುರೋಪ್ಗೆ) ಅತ್ಯಂತ ಅವಶ್ಯಕವಾಗಿದೆ.
ಯುರೋಪ್ನೊಂದಿಗೆ ಭಾರತ ನಡೆಸುವ ಶೇಕಡ 80ರಷ್ಟು ವ್ಯಾಪಾರ ವಹಿವಾಟು ಈ ಕಾರಿಡಾರ್ ಮೂಲಕವೇ ನಡೆಯುತ್ತದೆ.
ಹಡಗುಗಳು ಆಫ್ರಿಕಾವನ್ನು ಸುತ್ತಿ ಬರಬೇಕಾದಲ್ಲಿ ಪ್ರಯಾಣವು 14ರಿಂದ 20ದಿನಗಳಷ್ಟು ತಡವಾಗುತ್ತದೆ ಮತ್ತು 4,000ದಿಂದ 6,000 ನ್ಯಾಟಿಕಲ್ ಮೈಲು ದೂರವಾಗುತ್ತದೆ.
ಬಬ್-ಎಲ್-ಮಂಡೇಬ್ ಜಲಸಂಧಿಯನ್ನು ಬಂದ್ ಮಾಡಿದ್ದಲ್ಲಿ ಸರಕು ಸಾಗಣೆ ವೆಚ್ಚ ಮತ್ತಷ್ಟು ಹೆಚ್ಚಳವಾಗುತ್ತದೆ. ಭಾರತದ ಕೃಷಿ ಉತ್ಪನ್ನಗಳು ಮತ್ತು ಜವಳಿ ರಫ್ತಿನ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ.
ಜಾಗತಿಕ ಪೂರೈಕೆ ಸರಪಳಿಯು ಈಗಾಗಲೇ ತೀವ್ರ ಸಂಕಷ್ಟದಲ್ಲಿರುವಾಗ 'ಹೂಥಿ'ಗಳ ಈ ನಡೆಯಿಂದ ಆರ್ಥಿಕತೆಗೆ ಮತ್ತಷ್ಟು ಪೆಟ್ಟು ನೀಡುವ ಸಾಧ್ಯತೆಯಿದೆ.
Explainer | ಇರಾನ್ ಯುದ್ಧಕ್ಕೆ ಹೂಥಿ ಪ್ರವೇಶ: ಎಲ್ಲರ ಚಿತ್ತ ಮಂಡೇಬ್ ಜಲಸಂಧಿಯತ್ತಹೊರ್ಮುಜ್ ಬೆನ್ನಲ್ಲೇ ಮತ್ತೊಂದು ಜಲಸಂಧಿ ಬಂದ್ ಮಾಡಲು ಮುಂದಾದ ಇರಾನ್?ಇರಾನ್ನಲ್ಲಿ ಸಿಲುಕಿದ್ದ ಯೋಧನನ್ನು ಅಮೆರಿಕ ಪಾರು ಮಾಡಿದ್ದು ಹೇಗೆ? ಇಲ್ಲಿದೆ ವಿವರಇರಾನ್ ಸಂತ್ರಸ್ತರಿಗಾಗಿ ಒಂದು ಮೊಟ್ಟೆ ಬರೋಬ್ಬರಿ ₹25 ಸಾವಿರಕ್ಕೆ ಹರಾಜು!
